Giant Taro ಅರ್ಥಾತ್ ದೈತ್ಯ ಕೆಸ ಎಂಬುದು ಇದರ ಅನ್ವರ್ಥಕ ನಾಮ. ನಮ್ಮಲ್ಲಿ ಹಾಲುಕೆಸ, ಇನ್ನು ಕೆಲವೆಡೆ ಮುಂಡಿ. ಬುಡದಲ್ಲಿಷ್ಟು ಕಸುವಿನ ಮಣ್ಣು, ಜೊತೆಗೆ ಧಾರಾಳ ಬಚ್ಚಲು ನೀರು ಸಿಕ್ಕರೆ ಸೊಕ್ಕಿ ಬೆಳೆಯುತ್ತದೆ. ಮನುಷ್ಯರು ಹೊಕ್ಕರೂ ಕಾಣದಂತೆ. ಒಮ್ಮೊಮ್ಮೆ ಇರುವ ಜಾಗವನ್ನೆಲ್ಲ ಆಕ್ರಮಿಸಿ ನಿಯಂತ್ರಿಸಲಾಗದೆ ಕಸಿವಿಸಿ ಮಾಡುವುದೂ ಉಂಟು.
ಹಾಲುಕೆಸದ ಗೆಡ್ಡೆ, ದಂಟು, ಸೊಪ್ಪು ಎಲ್ಲ ಬಹೂಪಯೋಗಿ. ಅಡುಗೆ ಪದಾರ್ಥಕ್ಕೆ, ಔಷಧೋಪಚಾರಕ್ಕೆ ಬಳಕೆ. ಈ ಸಸ್ಯವನ್ನು ಮೊದಲು ಫಿಲಿಪೈನ್ಸ್ ನಲ್ಲಿ ಪಳಗಿಸಿದರಂತೆ. ಆಮೇಲೆ ಆಗ್ನೇಯ ಏಷ್ಯಾ ಮತ್ತು ಶಾಂತಮಹಾಸಾಗರದ ಇತರ ದ್ವೀಪಗಳಿಗೆ ವಿಸ್ತರಿಸಿ, ಪಿಷ್ಟಮೂಲವಾಯಿತು ಎಂಬುದು ಲಭ್ಯ ಮಾಹಿತಿ.
ಮುಟ್ಟಿದರೆ, ತಿಂದರೆ, ರಸ ತಾಗಿದರೆ ತುರಿಕೆ ಶುರುವಾಗುವುದು ಎಲ್ಲ ಕೆಸದ ಮೇಲಿನ ಪ್ರಮುಖ ಆರೋಪ. ಭಕ್ಷಕರಿಂದ ತನ್ನನ್ನು ರಕ್ಷಿಸಿಕೊಳ್ಳಲು ಅದು ಮಾಡಿದ ಉಪಾಯ ಇರಬಹುದು. ಆದರೆ ಬಾಯಿ ರುಚಿಯ ಬುದ್ಧಿವಂತರು ತುರಿಕೆಯ ಅಂಶ ತೆಗೆಯಲು ಪ್ರತ್ಯುಪಾಯ ಕಂಡುಕೊಂಡಿದ್ದಂತೂ ಹೌದು.
– ವಿನಾಯಕ ಭಟ್ಟ, ನರೂರ
#ಎಲೆ #ನರೂರ #leaves #Colocasia_esculenta
ವಿನಾಯಕ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದವರು. ವಿಜ್ಞಾನ ಪದವೀಧರರು ಆಗಿರುವ ಇವರು ನಿವೃತ್ತ ಬ್ಯಾಂಕ್ ನೌಕರರು. ೨೦೦೪ರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಓದು, ಪರಿಸರ, ಛಾಯಾಗ್ರಹಣ, ಪ್ರವಾಸ ಮತ್ತು ಗ್ರಾಮೀಣ ಬದುಕಿನ ಕುರಿತು ಆಸಕ್ತಿ.
೨೦೨೧ರಲ್ಲಿ ಫೇಸ್ ಬುಕ್ ನಲ್ಲಿ ಪರ್ಣ ಲೋಕ ಎಂಬ ಹೆಸರಲ್ಲಿ ಸುಮಾರು ೧೦೦ ಕಂತುಗಳಾಗಿ ವಿನಾಯಕ ಭಟ್ಟರು ಬರೆದಿದ್ದರು, ಆ ಲೇಖನಗಳು ಓದುಗರಿಗೆ ಮತ್ತೊಮ್ಮೆ ಸಿಗಲಿ ಎಂಬ ದೃಷಿಯಿಂದ ಬುಕ್ಸ್ ಲೋಕ ಪ್ರಕಟ ಮಾಡುತ್ತಿದೆ. ಈ ಎಲ್ಲಾ ಲೇಖನಗಳು ಮರುಪ್ರಕಟಣೆ ಮಾಡಲು ಅವಕಾಶ ನೀಡಿದ ವಿನಾಯಕ ಭಟ್ಟರಿಗೆ ಧನ್ಯವಾದಗಳು.
– ಭಾರ್ಗವಿ, ಬುಕ್ಸ್ ಲೋಕ

