ಕೆಸರಿನಿಂದ ಎದ್ದು ಬಂದರೂ ಪರಿಶುಭ್ರವಾಗಿರುವ ಕಮಲ (ತಾವರೆ) ಕಂಡರೆ ಪ್ರಾಚೀನ ಜನರಿಗೂ ಅಚ್ಚರಿ ಇದ್ದೀತು. ಹೀಗಾಗಿ ಹಿಂದು, ಜೈನ, ಬೌದ್ಧ, ಬಹಾಯಿಗಳ ಧಾರ್ಮಿಕ, ಆಧ್ಯಾತ್ಮಿಕ ನಂಬುಗೆಗಳಲ್ಲಿ ಕಮಲಕ್ಕೆ ಮಹತ್ವದ ಸ್ಥಾನ. ಇನ್ನು ನೀರೊಳಗಿದ್ದು ನೀರು ಅಂಟಿಸಿಕೊಳ್ಳದ ಕಮಲದ ಎಲೆಯ ಬಗ್ಗೆ ವಿಜ್ಞಾನಿಗಳಿಗೆ ಕುತೂಹಲ. ಸುಮಾರು ನಲವತ್ತು ವರ್ಷಗಳ ಹಿಂದೆ ಜರ್ಮನಿಯ ವಿಜ್ಞಾನಿಗಳು ಇದರ ರಹಸ್ಯ ಪತ್ತೆಹಚ್ಚಿದರು. ಎಲೆಯ ಮೇಲಣ ಮೇಣಲೇಪಿತ ಸೂಕ್ಷ್ಮ ಹರಳುಗಳ ರಚನೆ ಬಹಿರಂಗವಾಗಿದ್ದು ಹೀಗೆ. ಪದ್ಮಪತ್ರದ ಮೇಲಿನ ಜಲಬಿಂದುವಿನ ಈ ವಿದ್ಯಮಾನ ‘Lotus effect’ ಎಂದು ಪ್ರಸಿದ್ಧವಾಗಿದೆ. ಕಮಲ, ಕೆಸುವಿನ ಎಲೆಯಂತೆ ಇನ್ನೂ ಕೆಲವು ಸಸ್ಯಗಳು ಇಂತಹ ರಕ್ಷಣಾ ವಿಧಾನ ಅಳವಡಿಸಿಕೊಂಡಿವೆ.
ನಿಸರ್ಗದ ವೈಚಿತ್ರ್ಯವನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ಮನುಷ್ಯರ ಅನುಕೂಲಕ್ಕೆ ಬಳಸುವುದು ಮುಂದಿನ ಹಂತ. ಗೋಡೆಗೆ ಹಚ್ಚುವ ಬಣ್ಣ, ವಾಹನದ ಗಾಜು, ಸೌರ ಫಲಕ, ತೊಳೆಯಬೇಕಿಲ್ಲದ ವಸ್ತ್ರ ಹೀಗೆ ಹಲವು ಬಗೆಯಲ್ಲಿ ‘ಕಮಲ ಪರಿಣಾಮ’ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಆರೋಗ್ಯ ಉದ್ದಿಮೆಯಲ್ಲಿ ಕೂಡ ಕಮಲದ ಎಲೆ ಪ್ರಭಾವ ಬೀರತೊಡಗಿದೆ!
The leaf stalks (petioles) can be upto 200 cm long, allowing the plant to grow in water to that depth and a horizontal spread of 1 meter. The leaves may be as large as 80 cm in diameter. (ಕೃಪೆ: ವಿಕಿಪೀಡಿಯಾ) ಅಂದರೆ ಎರಡು ಮೀಟರ್ ಆಳದ ನೀರಿನಲ್ಲಿ ಕೂಡ ಕಮಲ ಬೆಳೆಯಬಲ್ಲದು.
ನಮ್ಮ ಮನೆಯಲ್ಲಿ ಒಂದು ಆಕಳಿತ್ತು. ಕೆರೆ ಇಳಿದು ಕಮಲದ ಎಲೆ ಮೇಯುವ ಹವ್ಯಾಸ ಅದಕ್ಕೆ. ಹಾಗೆ ಮೇಯ್ದು ಬಂದಾಗಲೆಲ್ಲ ಹೆಚ್ಚು ಹಾಲು ಕರೆಯುವುದೆಂದು ಅಮ್ಮ ಪತ್ತೆ ಮಾಡಿದ್ದಳು!
Lotus effect ಕುರಿತು ಕನ್ನಡದಲ್ಲಿ ಅದ್ಭುತ ಮಾಹಿತಿಗೆ ಈ ಕೊಂಡಿ ನೋಡಿ:
https://m.facebook.com/story.php?story_fbid=3781063465330514&id=100002806940793
– ವಿನಾಯಕ ಭಟ್ಟ, ನರೂರ
#ಎಲೆ #ನರೂರ #leaves #Colocasia_esculenta
ವಿನಾಯಕ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದವರು. ವಿಜ್ಞಾನ ಪದವೀಧರರು ಆಗಿರುವ ಇವರು ನಿವೃತ್ತ ಬ್ಯಾಂಕ್ ನೌಕರರು. ೨೦೦೪ರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಓದು, ಪರಿಸರ, ಛಾಯಾಗ್ರಹಣ, ಪ್ರವಾಸ ಮತ್ತು ಗ್ರಾಮೀಣ ಬದುಕಿನ ಕುರಿತು ಆಸಕ್ತಿ.
೨೦೨೧ರಲ್ಲಿ ಫೇಸ್ ಬುಕ್ ನಲ್ಲಿ ಪರ್ಣ ಲೋಕ ಎಂಬ ಹೆಸರಲ್ಲಿ ಸುಮಾರು ೧೦೦ ಕಂತುಗಳಾಗಿ ವಿನಾಯಕ ಭಟ್ಟರು ಬರೆದಿದ್ದರು, ಆ ಲೇಖನಗಳು ಓದುಗರಿಗೆ ಮತ್ತೊಮ್ಮೆ ಸಿಗಲಿ ಎಂಬ ದೃಷಿಯಿಂದ ಬುಕ್ಸ್ ಲೋಕ ಪ್ರಕಟ ಮಾಡುತ್ತಿದೆ. ಈ ಎಲ್ಲಾ ಲೇಖನಗಳು ಮರುಪ್ರಕಟಣೆ ಮಾಡಲು ಅವಕಾಶ ನೀಡಿದ ವಿನಾಯಕ ಭಟ್ಟರಿಗೆ ಧನ್ಯವಾದಗಳು.
– ಭಾರ್ಗವಿ, ಬುಕ್ಸ್ ಲೋಕ

