ಕೆಸ, ಕಮಲಗಳು ತಮ್ಮ ಎಲೆಯ ಮೇಲಿನ ನೀರು ಜಾರಿಸಿದಂತೆ ಇನ್ಯಾವುದಾದರೂ ಇದೆಯಾ ಅಂತ ಯೋಚಿಸಿದಾಗ ಬಾಳೆ ನೆನಪಾಯಿತು. ವ್ಯತ್ಯಾಸವಿಷ್ಟೇ – ಇಲ್ಲಿ ಎಲೆಯ ಮೇಲ್ಪದರದ ಬದಲು ಅಡಿಭಾಗ, ಮೇಣಲೇಪನದ ಜಾಗದಲ್ಲಿ ಬಿಳಿ ಹುಡಿಯ ನವಿರು ಹೊದಿಕೆ. ಈ ಪುಡಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್ ಮಾಮನ ಮೊರೆ ಹೋದೆ. ಇತ್ತೀಚೆಗೆ ಸಂಚಲನ ಸೃಷ್ಟಿಸಿದ ಬಾಕಾಹು (ಬಾಳೆ ಕಾಯಿ ಹುಡಿ) ತೋರಿಸಿತು. ಆಮೇಲೆ ಆನ್ ಲೈನ್ ಮಾರುಕಟ್ಟೆಯ ದೈತ್ಯ ಸಂಸ್ಥೆಯ ಕುತೂಹಲಕಾರಿ ಪ್ರಚಾರ ಪುಟ ಕಾಣಿಸಿತು. 100 ಗ್ರಾಮ್ ಬಾಳೆ ಎಲೆ ಪುಡಿಗೆ ರೂ.375 ಮಾತ್ರ! ಇದು ಜೀವಕೋಶದ ಹಾನಿ ತಡೆಯುವ (antioxidant) ಪ್ರಯೋಜನದ ಶಿಫಾರಸಿನೊಂದಿಗೆ. ಈ ಪುಡಿ ಬಾಳೆಗೆ ಮೆತ್ತಿದ ಬಿಳಿ ಹುಡಿಯೋ ಅಥವಾ ಬಾಳೆ ಎಲೆಯನ್ನು ಕುಟ್ಟಿ ಮಾಡಿದ್ದೋ ತಿಳಿಯಲಿಲ್ಲ. ಏನೇ ಇರಲಿ, ಬೆಳೆಗಾರನಿಗೆ ಫಲದ ಸಂಗಡ ಎಲೆಯೂ ಆದಾಯ ತರಬಲ್ಲ ಅಪರೂಪದ ಸಸ್ಯ ಬಾಳೆ ಎಂಬುದು ಸತ್ಯ.
ನಾವು ವ್ಯಾಪಕವಾಗಿ ಬಳಸುವ ಎಲೆಗಳಲ್ಲಿ ಬಾಳೆ ಎಲೆಯು ಮೊದಲ ಸಾಲಿನಲ್ಲಿದೆ. ಬಾಳೆ ಬಳಕೆಯ ಪ್ರಯೋಜನಗಳ ಬಗ್ಗೆ ಹೊಸದಾಗಿ ಹೇಳುವುದೇನಿಲ್ಲ. ಆಹಾರ, ಔಷಧಿ, ಪೊಟ್ಟಣ, ಅಲಂಕಾರ, ಧಾರ್ಮಿಕ ಆಚರಣೆ ಹೀಗೆ ಅನೇಕ ರೂಪಗಳಲ್ಲಿ ಬಾಳೆ ನಮ್ಮ ಗೆಳೆಯನೇ. ಹಿಂದೆ #ಬಾಳೆಯೊಡನೆ_ಬಾಳ್ವೆ ಸರಣಿಯಲ್ಲಿ ಬರೆದ ಬರಹವನ್ನು ಆಸಕ್ತರು ಇಲ್ಲಿ ನೋಡಬಹುದು:
https://m.facebook.com/story.php?story_fbid=3299064723475427&id=100001157943529
ಮುಂದಿನ ತಿಂಗಳು ತಮ್ಮನ ಮಗಳ ಮದುವೆ. ಒಂದಿಷ್ಟು ಊಟದೆಲೆ ಸರಬರಾಜಿನ ಆಶ್ವಾಸನೆ ಕೊಟ್ಟಿದ್ದೆ. ಒಂದು ವಾರ ವಿರಾಮದ ಬಳಿಕ ನಿನ್ನೆ ತೋಟಕ್ಕೆ ಹೋಗಿ ಮೇಲೆ ನೋಡಿದಾಗ ‘ತಿಪ್ಪಾಭಟ್ಟರ ಚಂದ ಕೊಡೆ, ಸಾವಿರ ತೂತುಗಳೆಲ್ಲ ಕಡೆ’ ಪದ್ಯ ಬಾಯಿಗೆ ಬಂತು. ಕೀಟ ಕಾಟಕ್ಕೆ ಎಳೆ ಎಲೆಗಳೆಲ್ಲ ಚೂರು ಚೂರು.
– ವಿನಾಯಕ ಭಟ್ಟ, ನರೂರ
#ಎಲೆ #ನರೂರ #leaves
ವಿನಾಯಕ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದವರು. ವಿಜ್ಞಾನ ಪದವೀಧರರು ಆಗಿರುವ ಇವರು ನಿವೃತ್ತ ಬ್ಯಾಂಕ್ ನೌಕರರು. ೨೦೦೪ರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಓದು, ಪರಿಸರ, ಛಾಯಾಗ್ರಹಣ, ಪ್ರವಾಸ ಮತ್ತು ಗ್ರಾಮೀಣ ಬದುಕಿನ ಕುರಿತು ಆಸಕ್ತಿ.
೨೦೨೧ರಲ್ಲಿ ಫೇಸ್ ಬುಕ್ ನಲ್ಲಿ ಪರ್ಣ ಲೋಕ ಎಂಬ ಹೆಸರಲ್ಲಿ ಸುಮಾರು ೧೦೦ ಕಂತುಗಳಾಗಿ ವಿನಾಯಕ ಭಟ್ಟರು ಬರೆದಿದ್ದರು, ಆ ಲೇಖನಗಳು ಓದುಗರಿಗೆ ಮತ್ತೊಮ್ಮೆ ಸಿಗಲಿ ಎಂಬ ದೃಷಿಯಿಂದ ಬುಕ್ಸ್ ಲೋಕ ಪ್ರಕಟ ಮಾಡುತ್ತಿದೆ. ಈ ಎಲ್ಲಾ ಲೇಖನಗಳು ಮರುಪ್ರಕಟಣೆ ಮಾಡಲು ಅವಕಾಶ ನೀಡಿದ ವಿನಾಯಕ ಭಟ್ಟರಿಗೆ ಧನ್ಯವಾದಗಳು.
– ಭಾರ್ಗವಿ, ಬುಕ್ಸ್ ಲೋಕ

