“೨೫ ವರ್ಷಗಳಿಂದ ಹೆಣ್ಣು ಮಕ್ಕಳ ಏಳಿಗೆಗಾಗಿ ದುಡಿದಿದ್ದೇನೆ. ಅವರ ಕಷ್ಟ ಸುಖ ಕಣ್ಣಾರೆ ಕಂಡಿದ್ದೇನೆ. ಕುಡಿತದ ಚಟದಿಂದ ಮುತ್ತಿನಂಥ ಸಂಸಾರಗಳು ಒಡೆದು ಹೋಗಿವೆ. ಪ್ರೇಮಪೂರಿತ ದಾಂಪತ್ಯಗಳು ಮುರಿದು ಬಿದ್ದಿವೆ. ಕುಡಿತದ ಚಟಕ್ಕೀಡಾದ ಮನುಷ್ಯ ಹಾಳಾಗಿ ತನ್ನ ಸಿರಿ ಸಂಪತ್ತನ್ನೆಲ್ಲಾ ಖಾಲಿಮಾಡಿ ಸಂಸಾರದ ಶಾಂತಿ ಕಳೆದುಕೊಳ್ಳುವುದಕ್ಕೆ ಅವಕಾಶ ನೀಡುವ ಈ ಕಾಯ್ದೆ ಜಾರಿಯಾಗುವುದು ಏನೇನೂ ಸರಿಯಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಕುಡಿತದಿಂದ ಆರೋಗ್ಯ ಕೆಡುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ.
ಆರ್ಥಿಕ ಸ್ಥಿತಿ ಕೆಳಮಟ್ಟಕ್ಕೆ ಇಳಿಯುತ್ತದೆ. ಕುಡಿತದ ಚಟ ಅಂಟಿದರೆ ಬಿಡುವುದು ಸಾಧ್ಯವಿಲ್ಲ. ಹೀಗಾಗಿ ದಯವಿಟ್ಟು ಪಾನನಿಷೇಧವನ್ನು ಒಂದು ನೀತಿಯಾಗಿ ಉಳಿಸಿಕೊಳ್ಳಿ . ಇಲ್ಲವೇ ನನ್ನ ರಾಜೀನಾಮೆಯನ್ನು ಒಪ್ಪಿಕೊಳ್ಳಿ.”
ಇವು ಸುಮಾರು ಅರುವತ್ತು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದಲ್ಲಿ ಏಕೈಕ ಮಹಿಳಾ ಕ್ಯಾಬಿನೆಟ್ ಮಂತ್ರಿಗಳಾಗಿದ್ದ ಶ್ರೀಮತಿ ಯಶೋಧರಮ್ಮ ದಾಸಪ್ಪ ಅವರು ಸದನದಲ್ಲಿ ಆಡಿದ ಮಾತುಗಳು. ಅಂದು ಅವರು ನುಡಿದಂತೆಯೇ ರಾಜೀನಾಮೆ ನೀಡಿ ಹೊರಬಂದರು. ಸಣ್ಣ ಅಧಿಕಾರದ ಸ್ಥಾನಕ್ಕಾಗಿ ಇಳಿಯಬಾರದ ಕಡೆ ಇಳಿಯುವ ಇಂದಿನ ಸ್ಥಿತಿಯಲ್ಲಿ ಯಶೋಧರಮ್ಮ ಅವರ ಅಧಿಕಾರ ತ್ಯಾಗ ಊಹೆಗೂ ನಿಲುಕದ್ದು.
ಕರ್ನಾಟಕದ ಸ್ವಾತಂತ್ರ್ಯ ಚಳವಳಿ ಮತ್ತು ಸ್ವಾತಂತ್ರ್ಯಾ ನಂತರದ ರಾಜಕೀಯದಲ್ಲಿ ಧ್ರುವತಾರೆಯಂತೆ ಕಂಗೊಳಿಸುವ ಹೆಸರು ಶ್ರೀಮತಿ ಯಶೋಧರಮ್ಮ ದಾಸಪ್ಪ ಅವರದು. ಹೊಸಪೀಳಿಗೆಯ ಹಲವರಿಗೆ ಅವರ ಪರಿಚಯ ಅಷ್ಟಾಗಿ ಇದ್ದಿರಲಾರದು. ಕರ್ನಾಟಕ ಇಂಥ ಹಲವು ಧೀಮಂತ ಹೋರಾಟಗಾರರು ಮತ್ತು ರಾಜಕಾರಣಿಗಳನ್ನು ಪಡೆದಿತ್ತು ಎನ್ನುವುದು ಇಂದಿಗೂ ನಾವು ಹೆಮ್ಮೆ ಪಡಬೇಕಾದ ಸಂಗತಿ.
ಯಶೋಧರಾ ಹುಟ್ಟಿದ್ದು ೧೯೦೫ ರ ಮೇ ೨೮ ರಂದು. ಶ್ರೀಮತಿ ರೇವಮ್ಮ ಮತ್ತು ಕೆ.ಎಚ್. ರಾಮಯ್ಯ ಅವರ ಮಗಳಾಗಿ. ಕೆ.ಎಚ್. ರಾಮಯ್ಯ ಅವರು ಮೈಸೂರು ಅರಸೊತ್ತಿಗೆಯ ಆತ್ಮೀಯ ವಲಯದಲ್ಲಿ ಇದ್ದವರು ಮತ್ತು ಆಧುನಿಕ ಕರ್ನಾಟಕದ ಹಿಂದುಳಿದ ವರ್ಗಗಳ ಏಳಿಗೆಯ ಚರಿತ್ರೆಯಲ್ಲಿ ಭದ್ರ ಸ್ಥಾನ ಪಡೆದವರು. ಎಳವೆಯಿಂದಲೇ ತಮ್ಮ ಮಗಳನ್ನು ಛಲಗಾತಿಯಾಗಿ ಬೆಳೆಸಿದರು. ಯಶೋಧರಾ ಎಳೆಯ ಮಗುವಾಗಿದ್ದಾಗ ಒಮ್ಮೆ ರಾಮಯ್ಯ ಅವರು ಮಗುವನ್ನು ಚಿವುಟಿ ಅಳಿಸಿದರಂತೆ ! . ಅದಕ್ಕೆ ಅವರ ತಾಯಿ ಯಾಕೋ ಮಗುವನ್ನು ಅಳಿಸುತ್ತಿರುವೆ ಎಂದು ಕೇಳಿದರೆ, ಇವಳು ಬೆಳೆದು ದೊಡ್ಡವಳಾಗಿ ಹೋರಾಟದ ಸಭೆಗಳಲ್ಲಿ ಎಲ್ಲರಿಗೂ ಕೇಳುವಂತೆ ಗಟ್ಟಿ ದನಿಯಲ್ಲಿ ಮಾತನಾಡಬೇಕು ಅದಕ್ಕೆ! ಎಂದರಂತೆ.
ಅಪ್ಪನ ಈ ಆಸೆಯನ್ನು ಮಗಳು ಹುಸಿಗೊಳಿಸಲಿಲ್ಲ.
೧೯೨೦ ರ ದಶಕದಲ್ಲಿಯೇ ದೂರದ ಮದ್ರಾಸಿನ ಕ್ವೀನ್ಸ್ಮೇರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಅನ್ನು ಪೂರೈಸಿದ ಯಶೋಧರಾ ಅವರ ಮದುವೆ ೧೯೨೬ ರಲ್ಲಿ ಶ್ರೀ ದಾಸಪ್ಪ ಅವರೊಂದಿಗೆ ಜರುಗಿತು. ಅಗ ಅವರಿಗೆ ೨೧ ವರ್ಷ. ನಂತರದ ವರ್ಷಗಳಲ್ಲಿ ಮೈಸೂರಿನ ರಾಜಕಾರಣ ಮತ್ತು ಸ್ವಾತಂತ್ರ್ಯ ಚಳವಳಿ ಎರಡರಲ್ಲಿಯೂ ತಮ್ಮ ಛಾಪು ಮೂಡಿಸಿದರು ಯಶೋಧರಾ. ೧೯೩೩ ರಲ್ಲಿ ತಂದೆಯನ್ನು ಕಳೆದುಕೊಂಡ ಅವರು ಬಹಳ ಬೇಗ ಚೇತರಿಸಿಕೊಂಡು ರಾಜಕೀಯ ಚಳವಳಿಯಲ್ಲಿ ಸಕ್ರಿಯರಾದರು.
ಕರ್ನಾಟಕದ ಸ್ವಾತಂತ್ರ್ಯ ಚಳವಳಿಯ ಎರಡು ಮಹತ್ವದ ಮೈಲುಗಲ್ಲುಗಳೆಂದರೆ, ಶಿವಪುರದ ಧ್ವಜ ಸತ್ಯಾಗ್ರಹ ಮತ್ತು ವಿದುರಾಶ್ವಥ ದುರಂತ. ಇವೆರಡೂ ಹೋರಾಟಗಳಲ್ಲಿ ಯಶೋಧರಾ ಅವರ ಹೆಜ್ಜೆ ಗುರುತುಗಳಿವೆ. ೧೯೩೮ ರಲ್ಲಿ ಮೈಸೂರು ಅರಸೊತ್ತಿಗೆಯ ಆಜ್ನೆಯನ್ನು ಉಲ್ಲಂಘಿಸಿ ಧ್ವಜ ಹಾರಿಸಿದವರಲ್ಲಿ ಯಶೋಧರಮ್ಮ ಕೂಡ ಒಬ್ಬರು. ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಮುಖಂಡರನ್ನು ಸರ್ಕಾರ ಬಂಧಿಸಿದಾಗ ಎದೆಗುಂದದ ಯಶೋಧರಾ ತಮ್ಮ ಚಿಕ್ಕ ಮಕ್ಕಳಿಬ್ಬರನ್ನು ಚಳವಳಿಗಾರರ ಮಡಿಲಿಗೆ ಹಾಕಿ ಮುಂಚೂಣಿಯಲ್ಲಿ ನಿಂತು ಧ್ವಜದ ರಕ್ಷಣೆ ಮಾಡಿದರಂತೆ.
ವಿದುರಾಶ್ವಥ ಹೋರಾಟವನ್ನು ಕರ್ನಾಟಕದ ಜಲಿಯನ್ ವಾಲಾಬಾಘ್ ಎಂದೇ ಗುರುತಿಸಲಾಗುತ್ತದೆ. ಶಿವಪುರದ ಸತ್ಯಾಗ್ರಹದಂತೆಯೇ ಶಾಂತಿಯುತವಾಗಿ ನಡೆಯುತ್ತಿದ್ದ ವಿದುರಾಶ್ವಥ ಹೋರಾಟವು ಅಧಿಕಪ್ರಸಂಗಿ ಪೊಲೀಸ್ ಅಧಿಕಾರಿಯೊಬ್ಬನಿಂದ ರಕ್ತಸಿಕ್ತವಾಯ್ತು. ಅಂದು ತಮ್ಮ ಪ್ರಾಣವನ್ನು ಸ್ವಾತಂತ್ರ್ಯ ಕ್ಕಾಗಿ ಅರ್ಪಿಸಿದವರು ೩೮ ಜನ ದೇಶಭಕ್ತರು. ಈ ದುರಂತದ ಕಾವನ್ನು ತಣ್ಣಗಾಗಲು ಬಿಡದ ಹೋರಾಟಗಾರರು ಮುಂದಿನ ಅಧಿವೇಶನವನ್ನು ಆ ದುರಂತ ನಡೆದ ಸ್ಥಳದಲ್ಲಿಯೇ ನಡೆಸಿದರು. ಆಗ ದುರಂತದಲ್ಲಿ ಹುತಾತ್ಮಳಾದ ಹೆಣ್ಣುಮಗಳ ಹೆಸರೆತ್ತದ ಗಂಡಾಳ್ವಿಕೆಯ ಮನಃಸ್ಥಿತಿಯ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡವರು ಶ್ರೀಮತಿ ಯಶೋಧರಮ್ಮ. ಹೀಗೆ ತಾವು ಹೊಸಕಾಲದ ಹೆಣ್ಣು ಜೀವ ಎಂಬುದನ್ನು ಸಾಬೀತು ಪಡಿಸಿದರು.
ಮೈಸೂರಿನಲ್ಲಿ ಒಮ್ಮೆ ವಿದುರಾಶ್ವಥ ದುರಂತದಲ್ಲಿ ಹುತಾತ್ಮರಾದ ಹೋರಾಟಗಾರನ ಪತ್ನಿಗೆ ಯಶೋಧರಮ್ಮ ಆಶ್ರಯ ನೀಡಿದ್ದಾಗ ಅದು ಅರಮನೆಗೆ ತಿಳಿದು; ಅಲ್ಲಿಂದ ಸಂದೇಶ ಬಂತಂತೆ. ಆಕೆಯನ್ನು ವಾಪಾಸು ಕಳಿಸಿ ಇಲ್ಲವೇ ಅರಸೊತ್ತಿಗೆ ಕಡೆಯಿಂದ ಪಡೆದ ಕಟ್ಟಡವನ್ನು ಹಿಂದಿರುಗಿಸಿ ಎಂದು. ಬೇರೆ ಯಾರಾದರೂ ಆಗಿದ್ದರೆ ವಿಶಾಲ ಹಿತಾಸಕ್ತಿಯ ಹೆಸರಲ್ಲಿ ಹುತಾತ್ಮನ ಪತ್ನಿಯನ್ನು ತೊರೆದು ರಾಜಾಶ್ರಯವನ್ನು ಉಳಿಸಿಕೊಳ್ಳುತ್ತಿದ್ದರೋ ಏನೊ. ಆದರೆ ಯಶೋಧರಮ್ಮ ಅವರು ಅರಮನೆಯ ಸವಲತ್ತು ತಿರಸ್ಕರಿಸಿ ಆತ್ಮಾಭಿಮಾನವನ್ನು ಉಳಿಸಿಕೊಂಡರು.
ಹೋರಾಟದ ಜೊತೆಗೆ ಆಧುನಿಕ ಪ್ರಜಾಪ್ರಭುತ್ವದ ಮಾತೃಕೆಯಂತಿದ್ದ ಮೈಸೂರು ನ್ಯಾಯ ವಿಧಾಯಕಸಭೆಯ ಚುನಾವಣೆಯನ್ನು ಯಶೋಧರಮ್ಮ ಎದುರಿಸಿದ್ದು ೧೯೩೮ ರಲ್ಲಿ. ಅದರಲ್ಲಿ ಅವರ ಎದುರಾಳಿ ರಾವ್ ಸಾಹೇಬ್ ಮುನಿವೆಂಕಟಪ್ಪ.
ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿದ್ದ ಯಶೋಧರಮ್ಮ ಮತ್ತು ದಾಸಪ್ಪ ದಂಪತಿ ಜೋಡಿ ಮಹಾತ್ಮ ಗಾಂಧೀಜಿಯವರಿಗೆ ಅಪರಿಚಿತರಾಗಿ ಉಳಿಯಲಿಲ್ಲ. ಗಾಂಧೀಜಿಯವರ ಸರಳ ಬದುಕಿನ ಪ್ರಯೋಗವನ್ನು ವ್ಯಸನದಂತೆ ಅನುಸರಿಸಿದ ಈ ದಂಪತಿಗಳ ಬಗ್ಗೆ ಮಹಾತ್ಮರಿಗೆ ಕೂಡ ವಿಶೇಷ ಮಮತೆ. ಗಾಂಧೀಜಿಯವರ ಆಹ್ವಾನದ ಮೇರೆಗೆ ಸೇವಾಗ್ರಾಮಕ್ಕೆ ತೆರಳಿ ತಂಗಿದ್ದ ದಾಸಪ್ಪ ಅವರ ದೇಹತೂಕವನ್ನು ಇಳಿಸಲು ಗಾಂಧಿ ತಮ್ಮ ಆಹಾರ ಕ್ರಮದ ಪ್ರಯೋಗವನ್ನು ಬಳಸಿ ಅವರ ಆರೋಗ್ಯವೃದ್ಧಿಗೂ ಕಾರಣರಾಗಿದ್ದರು. ಆಗ ಕಸ್ತೂರ್ ಬಾ ಅವರು ದಾಸಪ್ಪ ಅವರನ್ನು ಮಗನಂತೆ ಸಲಹಿದ್ದರಂತೆ.
ಮೈಸೂರು ರಾಜ್ಯದ ಸ್ವಾತಂತ್ರ್ಯ ಚಳವಳಿಯ ಕಾವು ಏರುತ್ತಿದ್ದಂತೆಯೂ ಅರಸೊತ್ತಿಗೆಯ ದಮನದ ತೀವ್ರತೆಯೂ ಹೆಚ್ಚುತ್ತಿತ್ತು. ಹೋರಾಟದ ಮುಂಚೂಣಿಯಲ್ಲಿದ್ದ ದಾಸಪ್ಪ ಅವರ ವಕೀಲಿ ಸನ್ನದನ್ನು ಸರ್ಕಾರ ಕುಂಟುನೆಪ ಹೇಳಿ ರದ್ದುಮಾಡುತ್ತದೆ. ಆಗ ಸ್ವತಃ ಗಾಂಧಿ ಈ ಕ್ರಮವನ್ನು ಖಂಡಿಸಿ ಮತ್ತು ಅತ್ಯಂತ ಕಡಮೆ ಸಂಪಾದನೆಯಲ್ಲಿಯೇ ಬದುಕುವುದು ಹೇಗೆ ಎಂಬುದನ್ನು ಕುರಿತು ತಮ್ಮ ಹರಿಜನ್ ಪತ್ರಿಕೆಯಲ್ಲಿ ಸಂಪಾದಕೀಯ ಬರೆಯುತ್ತಾರೆ. ನಂತರದಲ್ಲಿ ಗಾಂಧಿಯವರಿಗೆ ತಾವು ಸಂಸಾರ ಸಮೇತ ಆಶ್ರಮಕ್ಕೆ ಬರುವುದಾಗಿ ಕೊಟ್ಟಿದ್ದ ಮಾತನ್ನು ದಾಸಪ್ಪ ಉಳಿಸಿಕೊಂಡುದು ೧೯೪೪ ರಲ್ಲಿ. ಆಗ ಗಾಂಧಿಯ ಸಾಂಗತ್ಯದ ಅನುಭೂತಿಯನ್ನು ಪಡೆದ ಯಶೋಧರಮ್ಮ ತಮ್ಮ ಬದುಕಿನ ಕಡೆಯ ಕ್ಷಣದವರೆಗೂ ಅದನ್ನು ಜತನ ಮಾಡಿದರು.
ಆಧುನಿಕ ಮನೋಸ್ಥಿತಿಯ ಯಶೋಧರಮ್ಮ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಮತ್ತು ದಲಿತರ ದೇವಾಲಯ ಪ್ರವೇಶದಂತ ಉಪಕ್ರಮಗಳನ್ನು ಅಂದಿನ ನ್ಯಾಯ ವಿಧಾಯಕಸಭೆಯಲ್ಲಿ ಒತ್ತಿಹೇಳಿದ್ದರು. ಅಷ್ಟೇ ಅಲ್ಲದೆ ಈ ವಿಚಾರದಲ್ಲಿ ಸಾರ್ವಜನಿಕ ಸಮ್ಮತಿ ಸುಲಭಕ್ಕೆ ದೊರೆಯದು. ಅದನ್ನುಕಾನೂನು ದಂಡ ಪ್ರಯೋಗಿಸಿ ದೇಶಕ್ಕೆ ಹಿತವಾದುದನ್ನು ಮಾಡಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದರು.
” ದೀನ ದಲಿತರ, ಸ್ತ್ರೀಯರ , ಮಕ್ಕಳ , ನಿರ್ಗತಿಕ ಮಹಿಳೆಯರ ಹಾಗೂ ಸರ್ವರೂ ಕಡೆಗಣಿಸಿದವರ ಸೇವೆಯನ್ನು ದೇಶದಲ್ಲಿ ದೇವರೇ ಹುಟ್ಟಿಬಂದರೂ ಶ್ರಿಮತಿ ಯಶೋಧರಮ್ಮನವರಷ್ಟು ಕೆಲಸ ಮಾಡಲು ಸಾಧ್ಯವಿರಲಿಲ್ಲ. ಶ್ರೀಮತಿ ಯಶೋಧರಮ್ಮ ದಾಸಪ್ಪ ಕರ್ನಾಟಕದ ಕಸ್ತೂರ್ ಬಾ
– ಡಾ . ಗೊರೂರು ರಾಮಸ್ವಾಮಿ ಅಯ್ಯಂಗಾರ್.
ಗೊರೂರರ ಮಾತುಗಳು ಉತ್ಪ್ರೇಕ್ಷೆಯೇನಲ್ಲ. ಇದನ್ನು ಅರಿಯಲು ಕೊಂಚ ಹಿಂದಿನ ಘಟನಾವಳಿಗಳನ್ನು ಅವಲೋಕಿಸಬೇಕು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಪತಿಯೊಂದಿಗೆ ಜೈಲು ಸೇರಿದ ಕಸ್ತೂರ್ ಬಾ ಜೀವಂತವಾಗಿ ಬಿಡುಗಡೆ ಪಡೆಯಲೇ ಇಲ್ಲ. ಅವರ ಸ್ಮರಣಾರ್ಥ ಕಸ್ತೂರ್ ಬಾ ಹೆಸರಲ್ಲಿ ಕೊಟ್ಟ ದೇಣಿಗೆಯನ್ನು ಅವರದೇ ಹೆಸರಿನಲ್ಲಿ ಸ್ಮಾರಕ ಟ್ರಸ್ಟ್ ಸ್ಥಾಪಿಸಲಾಯ್ತು. ಈ ಟ್ರಸ್ಟಿನ ದೇಶದ ೨೪ ಗಣ್ಯರ ಧರ್ಮದರ್ಶಿ ಮಂಡಳಿಯೂ ರಚನೆಯಾಯ್ತು. ಅದರಲ್ಲಿ ಕರ್ನಾಟಕದ ಏಕೈಕ ಸದಸ್ಯೆ ಯಶೋಧರಮ್ಮ ದಾಸಪ್ಪ. ಅಲ್ಲಿಂದ ಅವರು ಇಹಲೋಕ ತ್ಯಜಿಸುವವರೆಗೂ ಟ್ರಸ್ಟ್ ನ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕರ್ನಾಟಕದಲ್ಲಿ ಕಸ್ತೂರ್ ಬಾ ಟ್ರಸ್ಟಿನ ಹಲವು ಆಶ್ರಮಗಳಿದ್ದರೂ ಅರಸೀಕೆರೆ ಬಳಿ ಇರುವ (ಮೈಸೂರು- ಶಿವಮೊಗ್ಗ ಹೆದ್ದಾರಿ) ಕಸ್ತೂರ್ ಬಾ ಆಶ್ರಮ ಯಶೋಧರಮ್ಮ ಅವರ ಪ್ರಯತ್ನದ ಫಲ. ಇಂದಿಗೂ ಸಕ್ರಿಯವಾಗಿದೆ. ಈ ಆಶ್ರಮ ಕುರಿತ ನೀಲನಕ್ಷೆ ತಯಾರಿಸಿ ಗಾಂಧಿ ಅವರ ಬಳಿ ಹೋದಾಗ ಅವರು ಏಕಾಏಕಿ ಒಪ್ಪಲಿಲ್ಲವಂತೆ. “ನಿನ್ನ ಗಂಡ ಮಕ್ಕಳು ಮಾಡುತ್ತಾರೆ ಎಂದರೆ ಆಗದು. ನಿನಗಿರುವ ನಂಬಿಕೆ ಅವರಿಗಿರುವುದಿಲ್ಲ; ನೀನು ಅಲ್ಲಿಯೇ ಮಣ್ಣಾಗಬೇಕು” ಎಂದು ಮಾತು ತೆಗೆದುಕೊಂಡರಂತೆ.
ಯಶೋಧರಮ್ಮ ಅವರು ಮಹಾತ್ಮರಿಗೆ ಕೊಟ್ಟ ಮಾತಿನಂತೆ ಅಲ್ಲಿಯೇ ಮಣ್ಣಾದರು. ಗಾಂಧಿ ಅವರ ಚಿತಾಭಸ್ಮದ ಸಮಾಧಿಯ ಬಳಿ.
ಸ್ವಾತಂತ್ರ್ಯಾ ನಂತರದಲ್ಲಿ ದಾಸಪ್ಪನವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ ಸಹ ಯಶೋಧರಮ್ಮ ಅವರು ಕಸ್ತೂರ್ ಬಾ ಟ್ರಸ್ಟ್ ಕೆಲಸಗಳಲ್ಲಿ ತಮ್ಮನ್ನು ವ್ಯಸ್ತರಾಗಿಸಿಕೊಂಡಿದ್ದರು. ಹಾಗೆಂದು ರಾಜಕೀಯ ಚಟುವಟಿಕೆಗಳಿಂದ ದೂರವಿದ್ದವರಲ್ಲ, ಚುನಾವಣಾ ರಾಜಕೀಯದಿಂದ ಅಂತರ ಕಾಪಾಡಿಕೊಂಡಿದ್ದರು. ೧೯೬೨ ರಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಹಾಸನದ ಗಂಡಸಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಫರ್ಧಿಸಿ ಜಯಶೀಲರಾದರು. ಕಂಠಿ ಅವರ ಕ್ಯಾಬಿನೆಟ್ ನಲ್ಲಿ ಮಂತ್ರಿಯಾಗಿ, ನಂತರ ನಿಜಲಿಂಗಪ್ಪನವರ ಮಂತ್ರಿಮAಡಲದಲ್ಲಿಯೂ ಮುಂದುವರಿದರು.
ಒಕ್ಕೂಟ ಸರ್ಕಾರದಲ್ಲಿ ದಾಸಪ್ಪ , ರಾಜ್ಯದಲ್ಲಿ ಯಶೋಧರಮ್ಮ ಇಬ್ಬರಿಗೂ ಸಚಿವಸ್ಥಾನ ಒಲಿದು ಬಂದಿತ್ತು. ಆಗ ಆ ಸತಿಪತಿಗಳು ಮಾಡಿದ ಕೆಲಸವೆಂದರೆ ; ತಮ್ಮೆಲ್ಲ ಬಂಧುಗಳನ್ನು ಕರೆದು ಊಟ ಹಾಕಿದ್ದು! . ಆ ಔತಣ ಸಾಮಾನ್ಯದ್ದಾಗಿರಲಿಲ್ಲ. ಎಲ್ಲ ಬಂಧುಗಳನ್ನೂ ಸೇರಿಸಿದ್ದೇ ಅವರಿಗೆ ಮನವಿ ಮಾಡಲೆಂದು. ತಾವಿಬ್ಬರೂ ಮಂತ್ರಿಗಳಾಗಿರುವುದು ಜನಸೇವೆಗೇ ಹೊರತು ಸ್ವಜನ ಪಕ್ಷಪಾತ ಮಾಡಲು ಅಲ್ಲ. ಹೀಗಾಗಿ ನೀವಾರೂ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ನಮ್ಮ ಬಳಿ ಸಚಿವ ಪದವಿ ಇರುವವರೆಗೂ ಬರಬೇಡಿ ಎಂದು ವಿನಂತಿಸಿದರಂತೆ.
ದಮನಿತ ಜನರ ಸೇವೆ ಮಾಡುವ ಹುಕಿಯಲ್ಲಿದ್ದ ಯಶೋಧರಮ್ಮ ಸಮಾಜ ಕಲ್ಯಾಣ ಖಾತೆಯನ್ನು ಕೇಳಿ ಪಡೆದಿದ್ದರಂತೆ. ದೀನ ದಲಿತರ, ಅಸಹಾಯಕರ, ಅಂಗವಿಕಲ, ಬುಡಕಟ್ಟು ಸಮುದಾಯಗಳು ಎಲ್ಲರ ಕೆಲಸ ಆ ಇಲಾಖೆಯ ವ್ಯಾಪ್ತಿಗೆ ಬರುತ್ತಿತ್ತು. ಅವರು ಸಚಿವರಾಗಿ ಇರುವಷ್ಟು ದಿನಗಳೂ ಹಗಲಿರುಳು ದುಡಿದು ತಮ್ಮ ಮೇಲಿದ್ದ ಸಮಾಜದ ಋಣ ಸಂದಾಯ ಮಾಡಿದರು. ರಾಜ್ಯಾದ್ಯಾಂತ ಹಿಂದುಳಿದ ವರ್ಗಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ, ಹಾಸ್ಟೆಲ್ ಗಳು, ಗ್ರಾಮೀಣ ಪ್ರದೇಶದ ಬಡವರಿಗೆ ಹೈನುಗಾರಿಗೆ, ಕುರಿಸಾಕಾಣಿಕೆ, ಗುಡಿಕೈಗಾರಿಕೆಗಳಿಗೆ ಸಹಾಯಧನ ಇತ್ಯಾದಿ ಸಕಲೆಂಟು ಸೇವಾ ಕೈಂಕರ್ಯವನ್ನು ಮಾಡಿದರು.
ಯಶೋಧರಮ್ಮ ಅವರ ಜನಸೇವೆಯ ದ್ಯೋತಕವಾಗಿ ಇಂದಿಗೂ ನಿಂತಿದೆ ಯಶೋಧರಪುರ ಎಂಬ ಊರು! ಹೌದು. ಇದು ಮೈಸೂರಿನಿಂದ ಮಡಿಕೇರಿಗೆ ಹೋಗುವ ಹೆದ್ದಾರಿಯಲ್ಲಿರುವ ಪುಟ್ಟ ಕಂದಾಯ ಗ್ರಾಮ. ಯಶೋಧರಮ್ಮ ಮಂತ್ರಿಗಳಾಗಿದ್ದಾಗ ಈಗಿನ ಚಾಮರಾಜನಗರ ಜಿಲ್ಲೆಯ ಕಾಡು ಪ್ರದೇಶದಿಂದ ಬುಡಕಟ್ಟು ಜನರಿಗೆ ಪುನರ್ವಸತಿ ಕಲ್ಪಿಸಬೇಕಿತ್ತಂತೆ. ಅವರೆಲ್ಲರನ್ನೂ ಯೋಗ್ಯ ರೀತಿಯಲ್ಲಿ ನಡೆಸಿಕೊಂಡು ಈಗಿರುವ ಊರನ್ನು ಕಂದಾಯ ಗ್ರಾಮವನ್ನಾಗಿಸಿ, ಎಲ್ಲ ಮೂಲಭೂತ ಸೌಕರ್ಯಗಳನ್ನೂ ಒದಗಿಸಿ ಕೊಟ್ಟರಂತೆ. ಆ ಕೆಲಸದ ಕೃತಜ್ಞತಾಪೂರ್ವಕವಾಗಿ ಅಲ್ಲಿನ ಜನ ಯಶೋಧರಮ್ಮನವರ ಹೆಸರನ್ನೇ ತಮ್ಮ ಊರಿಗೆ ಇರಿಸಿಕೊಂಡರಂತೆ. ಬಹುಶಃ ಈ ರೀತಿ ರಾಜಕಾರಣಿಯೊಬ್ಬರ ಹೆಸರು ಊರಿಗೆ ಇರುವುದು ಬಹುಶಃ ಅಪರೂಪದ್ದು ಎಂದು ಕಾಣುತ್ತದೆ.ಇಂಥ ಜನಾನುರಾಗಿಯಾಗಿದ್ದರು ಯಶೋಧರಮ್ಮ.
ಅಧಿಕಾರ ಯಾರಿಗೂ ಶಾಶ್ವತವಲ್ಲ, ಗಾಂಧೀಜಿಯವರ ಗರಡಿಯಲ್ಲಿ ಪಳಗಿದ್ದ ಯಶೋಧರಮ್ಮ ಅವರಿಗೆ ಕುರ್ಚಿಗೆ ಅಂಟಿ ಇರುವುದೂ ಬೇಕಿರಲಿಲ್ಲ ಎಂದು ಕಾಣುತ್ತದೆ. ಆರಂಭದಲ್ಲಿಯೇ ಉಲ್ಲೇಖಿಸಿದಂತೆ ಪಾನನಿಷೇಧ ವಿಷಯದಲ್ಲಿ ನಿಜಲಿಂಗಪ್ಪ ಅವರ ಸಂಪುಟದಿಂದ ಹೊರಬಂದರು. ಹಾಗೇ ರಾಜಕೀಯದಿಂದಲೂ ದೂರವಾದರು, ಆದರೆ ಜನಸೇವೆಯಿಂದಲ್ಲ. ನಂತರ ಹಲವು ಬಾರಿ ಒತ್ತಾಯಗಳು ಬಂದರೂ, ಸಕ್ರಿಯ ರಾಜಕಾರಣಕ್ಕೆ ಅವರು ಮರಳಲಿಲ್ಲ. ಅಷ್ಟೇ ಅಲ್ಲ ಅವರ ಮಗ ಸಂಸತ್ ಸದಸ್ಯರಾಗಿದ್ದವರು; ರಾಜಕೀಯದಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಿ ಅವರೂ ರಾಜಕಾರಣ ತೊರೆದರಂತೆ. ಇದು ಅವರು ತಮ್ಮ ಮಕ್ಕಳಿಗೆ ಕಲಿಸಿದ್ದ ನೈತಿಕ ಪಾಠವಾಗಿತ್ತು. ಹಾಗೇ ಯಶೋಧರಮ್ಮ ಎಳೆಯ ಮಗುವೊಂದನ್ನು ದತ್ತು ಪಡೆದಿದ್ದರು. ಅದು ಹುಟ್ಟಿನಿಂದ ತಳ ಸಮುದಾಯಕ್ಕೆ ಸೇರಿದ್ದಾಗಿತ್ತು. ಅವಳನ್ನು ಸ್ವಂತ ಮಗಳಾಗಿಸಿಕೊಂಡು
ಇತರ ಮಕ್ಕಳಂತೆ ತಾಯ್ತನದ ಪ್ರೀತಿ ಜೊತೆಗೆ ಆಸ್ತಿಯನ್ನೂ ಹಂಚಿ ತಾನೆಂಥ ತಾಯಿ ಎಂಬುದನ್ನೂ ಕಳಂಕಕ್ಕೆ ಎಡೆ ಇಲ್ಲದಂತೆ ಸಾಬೀತುಪಡಿಸಿದರು.
ಇದು ಯಶೋಧರಮ್ಮ ಅವರ ಜನುಮದ ನೂರಿಪ್ಪತ್ತನೇ ವರ್ಷ. ಅವರು ತಮ್ಮ ಬದುಕಿನಲ್ಲಿ ನಿರ್ವಹಿಸಿದ ಸ್ವಾತಂತ್ರ್ಯ ಚಳವಳಿ, ರಾಜಕಾರಣ, ಚುನಾವಣೆ, ಮಂತ್ರಿಗಿರಿ, ಪಕ್ಷ ಅಧ್ಯಕ್ಷೆಯಾಗಿ, ಗಾಂಧೀಜಿಯ ಅನುಯಾಯಿಯಾಗಿ, ಮಹಿಳಾ ವಿಮೋಚಕಿಯಾಗಿ ಹೀಗೆ ಎಲ್ಲ ಪಾತ್ರಗಳಲ್ಲೂ ತಮ್ಮ ಛಾಪು ಮೂಡಿಸಿದವರೆ.
ಗಾಂಧಿಯವರ ಕಟ್ಟಾ ಅನುಯಾಯಿಯಾಗಿದ್ದ ಯಶೋಧರಮ್ಮ ಪಾನಿನಿಷೇಧದ ವಿಚಾರದಲ್ಲಿ ಅಧಿಕಾರ ತ್ಯಜಿಸಿದುದನ್ನು ಕಂಡ ಗಾಂಧಿಯವರ ಶಿಷ್ಯ ಆಚಾರ್ಯ ವಿನೋಬ ಭಾವೆ ಅವರು” ಯಶೋಧರಾ ತುಮ್ ಗಂಗಾ ಬನ್ ಗಯೀ”. ( ಯಸೋಧರಾ ನೀನು ಮಹಾತಾಯಿ ಆಗಿಬಿಟ್ಟೆ) ಎಂದು ಉದ್ಘರಿಸಿದ್ದರಂತೆ. ಇಂಥ ಹೊಗಳಿಕೆಗಿಂತ ಇನ್ನೆಂಥ ಸಾರ್ಥಕತೆ ಬೇಕು ಬದುಕಿಗೆ.
- ರೋಹಿತ್ ಅಗಸರಹಳ್ಳಿ
ಈ ಲೇಖನವು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಬಾಪು ಪ್ರಪಂಚ ಪತ್ರಿಕೆಯ ಮೇ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.
ಮೇ ತಿಂಗಳ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ