ತೋಟದಿಂದ ಬರುವಾಗ ಒಮ್ಮೆಲೇ ರಭಸದ ಮಳೆ ಶುರುವಾಯಿತು. ಕೊಡೆ ಬಿಚ್ಚಿ ಒಂದೆಡೆ ನಿಂತೆ. ಪಕ್ಕದಲ್ಲಿ ಕೆಸ ಸೊಂಪಾಗಿ ಬೆಳೆದಿತ್ತು. ಉದ್ದ ದಂಟಿನ ತುದಿಗೆ ಅಗಲವಾದ ಎಲೆಗಳು. ಟಪಟಪನೆ ಮೇಲಿಂದ ಬಿದ್ದ ನೀರ ಹನಿಗಳು ಎಲೆಯ ಮೇಲೆ ಮುತ್ತಿನ ರೂಪ ತಾಳಿ, ದೊಡ್ಡ ಗೋಲಿಯ ಗಾತ್ರ ಪಡೆಯುವಷ್ಟರಲ್ಲಿ ಎಲೆ ಪಕ್ಕಕ್ಕೆ ಬಾಗಿ ನೀರನ್ನು ಜಾರಿಸಿ ಬಿಡುತ್ತಿತ್ತು. ಮಳೆ ನಿಂತ ಮೇಲೆ ನೋಡಿದರೆ ಕೆಸುವಿನ ಎಲೆ ತೊಳೆದಿಟ್ಟಂತೆ ಸ್ವಚ್ಛವಾಗಿತ್ತು.
ಅದರಲ್ಲೇನು ವಿಶೇಷ, ನುಣುಪಾದ ಎಲೆಯ ಮೇಲೆ ನೀರು ಹೇಗೆ ನಿಂತೀತು ಅನ್ನುವಿರಾ? ಕೆಸುವಿನ ಎಲೆಯ ಮೇಲ್ಮೈ ನುಣುಪಾಗಿಲ್ಲ ಎಂಬುದು ವಿಜ್ಞಾನಿಗಳ ಅಂಬೋಣ. ಅದರ ಮೇಲೆ ಮೇಣದ ಗುಬುಟೆಯಂಥ ಉಬ್ಬು ತಗ್ಗಿನ ಸೂಕ್ಷ್ಮ ರಚನೆ ಇರುವುದರಿಂದ ದೂಳು, ಕೆಸರು ಕೂಡ ಅಂಟದೆ ಎಲೆ ಸದಾ ಸ್ವಚ್ಛ! ಮಳೆಕಾಡಿನಲ್ಲಿ, ಜೌಗು ಪ್ರದೇಶದಲ್ಲಿ ಬೆಳೆಯುವ ಕೆಲವು ಸಸ್ಯಗಳು ಇಂತಹ hydrophobic (ಜಲವಿರೋಧಿ) ಲಕ್ಷಣ ಹೊಂದಿರುತ್ತವೆ. ಎಲೆಯ ಮೇಲೆ ತೇವಾಂಶದಿಂದ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾಗಳ ದಾಳಿ ತಡೆಯಲು ಈ ತಂತ್ರ.
ಪತ್ರೊಡೆಯೊಂದೇ ಕೆಸುವಿನ ಎಲೆಯ ಹೆಗ್ಗಳಿಕೆ ಅಂದವರಾರು?
Leaves are up to 40 cm x 24.8 cm and sprout from the rhizome. They are dark green above and light green beneath. They are triangular-ovate, sub-rounded and mucronate at the apex, with the tip of the basal lobes rounded or sub-rounded. The petiole is 0.8 – 1.2 m high (ಕೃಪೆ: ವಿಕಿಪೀಡಿಯ)
ಈ ವಿವರಣೆಯಲ್ಲಿ Rhizome – ಬೇರುಕಾಂಡ (ರೂಪಾಂತರವಾದ ಕಾಂಡ), Triangular-ovate – ತ್ರಿಕೋನ ಅಂಡಾಕಾರದ, Mucronate – ಚೂಪು, Lobes – ಭಾಗಗಳು ಎಂದು ಅರ್ಥೈಸಿಕೊಳ್ಳಬಹುದು.
– ವಿನಾಯಕ ಭಟ್ಟ, ನರೂರ
#ಎಲೆ #ನರೂರ #leaves #Colocasia_esculenta
ವಿನಾಯಕ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದವರು. ವಿಜ್ಞಾನ ಪದವೀಧರರು ಆಗಿರುವ ಇವರು ನಿವೃತ್ತ ಬ್ಯಾಂಕ್ ನೌಕರರು. ೨೦೦೪ರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಓದು, ಪರಿಸರ, ಛಾಯಾಗ್ರಹಣ, ಪ್ರವಾಸ ಮತ್ತು ಗ್ರಾಮೀಣ ಬದುಕಿನ ಕುರಿತು ಆಸಕ್ತಿ.
೨೦೨೧ರಲ್ಲಿ ಫೇಸ್ ಬುಕ್ ನಲ್ಲಿ ಪರ್ಣ ಲೋಕ ಎಂಬ ಹೆಸರಲ್ಲಿ ಸುಮಾರು ೧೦೦ ಕಂತುಗಳಾಗಿ ವಿನಾಯಕ ಭಟ್ಟರು ಬರೆದಿದ್ದರು, ಆ ಲೇಖನಗಳು ಓದುಗರಿಗೆ ಮತ್ತೊಮ್ಮೆ ಸಿಗಲಿ ಎಂಬ ದೃಷಿಯಿಂದ ಬುಕ್ಸ್ ಲೋಕ ಪ್ರಕಟ ಮಾಡುತ್ತಿದೆ. ಈ ಎಲ್ಲಾ ಲೇಖನಗಳು ಮರುಪ್ರಕಟಣೆ ಮಾಡಲು ಅವಕಾಶ ನೀಡಿದ ವಿನಾಯಕ ಭಟ್ಟರಿಗೆ ಧನ್ಯವಾದಗಳು.
– ಭಾರ್ಗವಿ, ಬುಕ್ಸ್ ಲೋಕ

