ಈ ಎಲೆ ಸರಣಿಯ ನೆಪದಲ್ಲಿ ನನ್ನ ಸಂಗ್ರಹದ ಕೆಲವು ಅಪರೂಪದ ಹೊತ್ತಿಗೆಗಳು ಕಪಾಟಿನ ಹೊರಗೆ ಬರುತ್ತಿವೆ. ‘ಹಸುರು ಹೊನ್ನು’ ಅಂಥ ಒಂದು ಪುಸ್ತಕ. ಕನ್ನಡದ ವಿಜ್ಞಾನ ಸಾಹಿತ್ಯ, ಅದರಲ್ಲೂ ಸಸ್ಯಶಾಸ್ತ್ರದ ವಿಷಯ ಬಂದಾಗ ಮೊದಲು ನೆನಪಾಗುವುದು ದಿವಂಗತ ಬಿ.ಜಿ.ಎಲ್.ಸ್ವಾಮಿಯವರ ಹೆಸರು. ಎಂಥಾ ಜಟಿಲ ವಿಚಾರವನ್ನಾದರೂ ಸಲೀಸಾಗಿ ಹಾಸ್ಯ ರಸದಲ್ಲಿ ಅದ್ದಿ ಉಣಬಡಿಸಿದವರು ಡಾ.ಸ್ವಾಮಿ. ಕಮಲ, ಕುಮುದ ಗೊಂದಲದ ಬಗ್ಗೆ ಈ ಪುಸ್ತಕದಲ್ಲಿ ಅವರ ಸುದೀರ್ಘ ವಿವರಣೆಯ ಕೆಲವು ವಾಕ್ಯಗಳನ್ನು ನೋಡೋಣ:
” … ದಕ್ಷಿಣ ಭಾರತದಲ್ಲಿ ಸಿಗುವ ಈ ಬಗೆಯ ಗಿಡಗಳನ್ನು ಹುಡುಕಿದರೆ ನಮಗೆ ದೊರಕುವಂಥವೂ ಎರಡೇ ಪ್ರಧಾನ ಜಾತಿಯವು; 1.ತಾವರೆ, 2.ನೆಯ್ದಿಲು. ಮೊದಲನೆಯದು ನಿಂಫೇಯ (Nymphaea), ಎರಡನೆಯದು ನೀಲಂಬಿಯಂ (Nelumbium).
ನೆಯ್ದಿಲು ಎಲೆ ನೀರಿನ ಮೇಲೆ ತಟ್ಟೆಯಂತೆ ಹರಡಿಕೊಂಡಿರುತ್ತದೆ; ತಾವರೆ ಎಲೆಯ ಕಾಂಡ ನೀರಿನಿಂದ ಮೇಲೆದ್ದು ಚಟಮ್ಮೆಂದು ನಿಂತಿರುತ್ತದೆ. ಎಲೆಯದು ಸ್ವಲ್ಪ ಬಾಣಲೆಯ ಆಕಾರ. ”
“.. ಸೂರ್ಯ ಚಂದ್ರರ ಆಗಮನ ನಿರ್ಗಮನಗಳಿಗೂ ನೆಯ್ದಿಲಿನ ನಗು ಮುನಿಸುಗಳಿಗೂ ಸಂಬಂಧವಿಲ್ಲ. ದಿವಂಗತ ಜಗದೀಶ ಚಂದ್ರ ಬೋಸರ ಪ್ರಯೋಗಗಳಿಂದ ನೆಯ್ದಿಲಿನ ಚಲನೆಯು ದೈನಂದಿನ ಶೀತೋಷ್ಣ ಪರಿಮಿತಿಗಳ ಏರಿಳಿತಗಳನ್ನು ಅವಲಂಬಿಸಿದೆಯೆಂದು ತಿಳಿದುಬಂದಿದೆ.”
ನೈದಿಲೆ ಎಲೆಯ ತೊಟ್ಟು ರಬ್ಬರ್ ನಳಿಕೆಯ ಥರ. ಹೀಗಾಗಿ ನೀರಿನ ಮಟ್ಟ ಏರಿಳಿದಾಗ ಎಲೆಯೂ ನೀರಿನ ಮಟ್ಟಕ್ಕೆ ಸರಿಯಾಗಿ ತೇಲುತ್ತದೆ. ಇದು ಹೆಚ್ಚು ಆಳವಾದ ನೀರಿನಲ್ಲಿ ಬೆಳೆಯದು. ವೆಲ್ವೆಟ್ಟಿನಂಥ ನುಣುಪಾದ ಎಲೆಗೆ ಕರಗಸದ ಅಂಚು. ಸೊಂಪಾಗಿ ಬೆಳೆದು ಇಡೀ ಕೆರೆ ಅಥವಾ ಕೊಳವನ್ನು ಆವರಿಸುತ್ತದೆ. ನೈದಿಲೆ ಹೂವಿನ ಬಣ್ಣ ಬಿಳಿ, ನೇರಳೆ, ಹಳದಿ, ಕೆಂಪು ಇತ್ಯಾದಿ.
ನಮ್ಮೂರಿನ ಕೆರೆಯಲ್ಲಿ ನಾಮಗೋಳಿ, ಗುಳುಮುಳುಕ, ಶಿಳ್ಳೆಬಾತು, ದೇವನಕ್ಕಿ ಇವೆಲ್ಲ ನೀರಿನಲ್ಲಿ ಗೂಡು ಕಟ್ಟಿ ಮರಿ ಮಾಡುತ್ತವೆ. ಈ ತೇಲುವ ಗೂಡು ಕಟ್ಟಲು ಅವು ಬಳಸುವುದು ಕಮಲ/ ನೈದಿಲೆಯ ಎಲೆ, ದಂಟು ಮತ್ತೆ ಜೊಂಡು!
– ವಿನಾಯಕ ಭಟ್ಟ, ನರೂರ
#ಎಲೆ #ನರೂರ #leaves #Colocasia_esculenta
ವಿನಾಯಕ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದವರು. ವಿಜ್ಞಾನ ಪದವೀಧರರು ಆಗಿರುವ ಇವರು ನಿವೃತ್ತ ಬ್ಯಾಂಕ್ ನೌಕರರು. ೨೦೦೪ರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಓದು, ಪರಿಸರ, ಛಾಯಾಗ್ರಹಣ, ಪ್ರವಾಸ ಮತ್ತು ಗ್ರಾಮೀಣ ಬದುಕಿನ ಕುರಿತು ಆಸಕ್ತಿ.
೨೦೨೧ರಲ್ಲಿ ಫೇಸ್ ಬುಕ್ ನಲ್ಲಿ ಪರ್ಣ ಲೋಕ ಎಂಬ ಹೆಸರಲ್ಲಿ ಸುಮಾರು ೧೦೦ ಕಂತುಗಳಾಗಿ ವಿನಾಯಕ ಭಟ್ಟರು ಬರೆದಿದ್ದರು, ಆ ಲೇಖನಗಳು ಓದುಗರಿಗೆ ಮತ್ತೊಮ್ಮೆ ಸಿಗಲಿ ಎಂಬ ದೃಷಿಯಿಂದ ಬುಕ್ಸ್ ಲೋಕ ಪ್ರಕಟ ಮಾಡುತ್ತಿದೆ. ಈ ಎಲ್ಲಾ ಲೇಖನಗಳು ಮರುಪ್ರಕಟಣೆ ಮಾಡಲು ಅವಕಾಶ ನೀಡಿದ ವಿನಾಯಕ ಭಟ್ಟರಿಗೆ ಧನ್ಯವಾದಗಳು.
– ಭಾರ್ಗವಿ, ಬುಕ್ಸ್ ಲೋಕ

