ಕರ್ನಾಟಕದ ಕರಾವಳಿ, ಮಲೆನಾಡಿನ ಸುಳ್ಯ, ಪುತ್ತೂರು, ಶೃಂಗೇರಿ, ತೀರ್ಥಹಳ್ಳಿ ಮತ್ತಿತರ ಭಾಗದ ಅಡಿಕೆ ಬೆಳೆಗಾರರು ಬೆಚ್ಚಿ ಬಿದ್ದಿದ್ದಾರೆ, ಸುಸ್ತಾಗಿದ್ದಾರೆ. ಅವರ ಭೀತಿಗೆ ಕಾರಣ: ಹಳದಿ ಎಲೆ ರೋಗ. ಫೈಟೋಪ್ಲಾಸ್ಮ ಎಂಬ ರೋಗಾಣು ಹರಡುವ ಈ ಕಂಟಕದಿಂದ ಸಾವಿರಾರು ಎಕರೆ ಅಡಿಕೆ ತೋಟ ನಾಶವಾಗಿದೆ. ಅಡಿಕೆ ಆಧರಿಸಿದ ಅಲ್ಲಿನ ಆರ್ಥಿಕತೆ, ಪೂರಕ ಉದ್ಯೋಗಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಅಕ್ಕ ಪಕ್ಕದ ಪ್ರದೇಶದ ರೈತರು ಕೂಡ ಅಡಿಕೆ ಮರದಲ್ಲಿ ಹಳದಿ ಎಲೆ ಕಂಡರೆ ಗಾಬರಿಯಾಗುತ್ತಿದ್ದಾರೆ.
ಎಲ್ಲ ಸಸ್ಯಗಳಂತೆ ಕೃಷಿಯ ಬೆಳೆಗಳು ಸಹಾ ಆರೋಗ್ಯವಾಗಿದ್ದಾಗ ನಿರ್ದಿಷ್ಟ ಹಸಿರಿನಿಂದ ನಳನಳಿಸುತ್ತವೆ. ಆದರೆ ರೋಗಬಾಧೆ, ಪೋಷಕಾಂಶಗಳ ಕೊರತೆ, ತೇವಾಂಶದ ಇಳಿಕೆ, ಮಣ್ಣಿನ ರಸಸಾರದಲ್ಲಿ ವ್ಯತ್ಯಾಸದಂತಹ ಕಾರಣಗಳಿಂದ ಎಲೆ ಬಾಡಿ, ಹಸಿರು ಮರೆಯಾಗಿ, ಹಳದಿ/ಕಂದು/ಕೆಂಪು ಛಾಯೆಗೆ ತಿರುಗುತ್ತದೆ. ಅಂದರೆ ಎಲೆಯ ಬಣ್ಣದ ಬದಲಾವಣೆ ಬೆಳೆಯ ಅನಾರೋಗ್ಯದ ಮುನ್ಸೂಚನೆಯಂತೆ. ಉದಾಹರಣೆಗೆ ಅಡಿಕೆಗೆ ಬಾಧಿಸುವ ತೀವ್ರ ಕೊಳೆರೋಗ, ಬೇರುಹುಳ, ಅಣಬೆರೋಗ, ಹಳದಿ ಮುಂಡಿಗೆ, ತೊಂಡೆ ರೋಗ ಇತ್ಯಾದಿಗಳ ಪರಿಣಾಮ ಕಾಣುವುದು ಎಲೆಯ ಮೇಲೆ. ಹೀಗಾದಾಗ ಬೆಳೆಗಾರನ ಮೊಗವೂ ಬಾಡಿ, ಬಣ್ಣಗೇಡಾಗುತ್ತದೆ.
ಕೆಲವೇ ವರ್ಷದ ಹಿಂದೆ ಅಡಿಕೆ ಸೋಗೆ (ಒಣಗಿದ ಎಲೆ) ಈ ಭಾಗದ ರೈತರ, ರೈತ ಕಾರ್ಮಿಕರ ಪಾಲಿನ ಅಮೂಲ್ಯ, ಅನಿವಾರ್ಯ ಸಾಮಗ್ರಿ ಆಗಿತ್ತು. ಮಳೆಗಾಲ ಮುಗಿದ ಕೂಡಲೆ ಪ್ರತಿನಿತ್ಯ ಬಿದ್ದ ಸೋಗೆಯನ್ನು ಒಟ್ಟುಗೂಡಿಸಿ, ಆಗಾಗ ಹಾಳೆ ಬೇರ್ಪಡಿಸಿ, ಗುಡಿಸಲು ಛಾವಣಿಯ ಹೊದಿಕೆಯಾಗಿ, ಮುಂದಿನ ಮಳೆಗಾಲದ ನೆರಿಕೆಯಾಗಿ ಬಳಸಲಾಗುತ್ತಿತ್ತು. ಆರ್ಥಿಕ ಸ್ಥಿತಿ ಉತ್ತಮವಾಗಿ ಹಂಚು-ತಾರಸಿಗಳು ಬಂದಮೇಲೆ, ಸರಕಾರದ ಗುಡಿಸಲು ಮುಕ್ತ ಗುರಿ ಏರಿದಂತೆ ಅಡಿಕೆ ಸೋಗೆಯ ಬಳಕೆ ಇಳಿಮುಖವಾಯಿತು. ಜಾಣ ರೈತರು ಅದನ್ನು ಕೊಚ್ಚಿ ಹಾಕಿ ಅಡಿಕೆ ಬುಡಕ್ಕೆ ಮುಚ್ಚಿಗೆ ಮಾಡುತ್ತಾರೆ.
ಅಡಿಕೆ ಎಲೆಯ ವಿವರಣೆ ವಿಕಿಪೀಡಿಯದಲ್ಲಿ:
“The leaves are 1.5 to 2 metres long, pinnate, with numerous, crowded leaflets”
ಅಂದರೆ ಒಂದೇ ಪತ್ರಕಾಂಡದ ಮೇಲೆ ಹಕ್ಕಿಗರಿಯಂತೆ ಎರಡೂ ಕಡೆ ಹಲವಾರು, ಒತ್ತೊತ್ತಾದ ಉಪಪರ್ಣಗಳಿರುವ ಒಂದೂವರೆಯಿಂದ ಎರಡು ಮೀಟರ್ ಉದ್ದದ ಸಂಯುಕ್ತ ಪರ್ಣ.
– ವಿನಾಯಕ ಭಟ್ಟ, ನರೂರ
#ಎಲೆ #ನರೂರ #leaves
ವಿನಾಯಕ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದವರು. ವಿಜ್ಞಾನ ಪದವೀಧರರು ಆಗಿರುವ ಇವರು ನಿವೃತ್ತ ಬ್ಯಾಂಕ್ ನೌಕರರು. ೨೦೦೪ರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಓದು, ಪರಿಸರ, ಛಾಯಾಗ್ರಹಣ, ಪ್ರವಾಸ ಮತ್ತು ಗ್ರಾಮೀಣ ಬದುಕಿನ ಕುರಿತು ಆಸಕ್ತಿ.
೨೦೨೧ರಲ್ಲಿ ಫೇಸ್ ಬುಕ್ ನಲ್ಲಿ ಪರ್ಣ ಲೋಕ ಎಂಬ ಹೆಸರಲ್ಲಿ ಸುಮಾರು ೧೦೦ ಕಂತುಗಳಾಗಿ ವಿನಾಯಕ ಭಟ್ಟರು ಬರೆದಿದ್ದರು, ಆ ಲೇಖನಗಳು ಓದುಗರಿಗೆ ಮತ್ತೊಮ್ಮೆ ಸಿಗಲಿ ಎಂಬ ದೃಷಿಯಿಂದ ಬುಕ್ಸ್ ಲೋಕ ಪ್ರಕಟ ಮಾಡುತ್ತಿದೆ. ಈ ಎಲ್ಲಾ ಲೇಖನಗಳು ಮರುಪ್ರಕಟಣೆ ಮಾಡಲು ಅವಕಾಶ ನೀಡಿದ ವಿನಾಯಕ ಭಟ್ಟರಿಗೆ ಧನ್ಯವಾದಗಳು.
– ಭಾರ್ಗವಿ, ಬುಕ್ಸ್ ಲೋಕ

