ನಾನು ತಮಿಳುನಾಡಿನ ಇರೋಡ್ ಜಿಲ್ಲೆಯ ಸತ್ಯಮಂಗಲದ ರೈತ. ನನಗೆ ಬೇಸಾಯದಲ್ಲಿ 59 ವರ್ಷಗಳ ಅನುಭವವಿದೆ. ಕಳೆದ 25 ವರ್ಷಗಳಿಂದ ಸಾವಯವ ಬೇಸಾಯ ಮಾಡುತ್ತಿದ್ದೇನೆ. ನನಗೆ 2000ರಲ್ಲಿ ನಾರಾಯಣ ರೆಡ್ಡಿಯವರ ಪರಿಚಯವಾಯಿತು. ಅವರು ಆಗಲೇ ಸಾವಯವ ಕೃಷಿಕರಾಗಿ ತುಂಬಾ ಜನಪ್ರಿಯರಾಗಿದ್ದರು. ಅವರನ್ನು ನಮ್ಮಲ್ಲಿಗೆ ಕರೆಸಬೇಕೆಂದು ನನಗೆ ಆಸೆ. ಅವರು ಬಿಡುವಿಲ್ಲದಂತಿರುತ್ತಾರೆ, ಸಿಗುವುದು ಕಷ್ಟ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ನಾರಾಯಣ ರೆಡ್ಡಿಯವರು ನಾನು ಕರೆದ ತಕ್ಷಣ ಒಪ್ಪಿಕೊಂಡು ನಮ್ಮೂರಿಗೆ ಬಂದರು. ಅವರಿಗೆ ನನ್ನ ಬಗ್ಗೆ ಏನೂ ತಿಳಿದಿಲ್ಲದಿದ್ದರೂ ನನ್ನ ಕೋರಿಕೆಯನ್ನು ಮನ್ನಿಸಿದರು. ಈ ಮೊದಲ ಅನುಭವವೇ ಅವರೆಡೆಗಿನ ನನ್ನ ಗೌರವ ಇಮ್ಮಡಿಸಲು ಕಾರಣವಾಯಿತು. ಆಗ ನಮ್ಮ ಗುಂಪಿನಲ್ಲಿ ಇದ್ದದ್ದು ಕೇವಲ 25 ಜನ ಸಾವಯವ ರೈತರು ಮಾತ್ರ. ಆದರೆ ಪ್ರತಿಯೊಬ್ಬರಲ್ಲೂ ಇದ್ದ ಸಾವಯವ ಆಸಕ್ತಿ ಮತ್ತು ತೊಡಗಿಸಿಕೊಳ್ಳುತ್ತಿದ್ದ ರೀತಿ ಅವರ ಮೇಲೆ ಪ್ರಭಾವ ಬೀರಿತ್ತು. ಅಲ್ಲಿಂದಾಚೆಗೆ ಅವರು ಪ್ರತಿ ತಿಂಗಳು ನಮ್ಮಲ್ಲಿಗೆ ಬಂದು ಸಾವಯವ ಕೃಷಿ ತರಬೇತಿ ಕೊಡುತ್ತಿದ್ದರು. ಬಲು ಬೇಗ ನಮಗೆ ಆಪ್ತರಾಗಿಬಿಟ್ಟರು.
ನಾರಾಯಣ ರೆಡ್ಡಿಯವರನ್ನು ನಾನು ನನ್ನ ಗುರುಗಳಲ್ಲಿ ಒಬ್ಬರಾಗಿ ಸ್ವೀಕರಿಸಿದ್ದೇನೆ. ಅದಕ್ಕೆ ಕಾರಣವಿದೆ. ಸಾವಯವ ಕೃಷಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾ ವೃಥಾ ಗೊಂದಲವೆಬ್ಬಿಸುತ್ತಿದ್ದ ಸಮಯದಲ್ಲಿ ನಾರಾಯಣ ರೆಡ್ಡಿ ಅತಿ ಸರಳವಾಗಿ ಮತ್ತು ಕ್ವಚಿತ್ತಾಗಿ ವಿಚಾರಗಳನ್ನು ನಮಗೆ ತಿಳಿಸಿಕೊಟ್ಟರು. ಹೇಳಬೇಕೆಂದರೆ, ನಾನು ಅವರಿಂದ ಸಾವಯವ ಕೃಷಿಯ ಪರಿಕಲ್ಪನೆಯನ್ನು ಯಥೋಚಿತವಾಗಿ ತಿಳಿದುಕೊಂಡೆ.
ಅವರು ಸೂಕ್ಷ್ಮಜೀವಿಗಳ ಬಗ್ಗೆ ನಮಗೆ ಸರಿಯಾಗಿ ಮನದಟ್ಟು ಮಾಡಿಸಿದರು. ನಾವು ಸೂಕ್ಷ್ಮಜೀವಿಗಳನ್ನು ಪ್ರಯೋಜಕ (beneficial) ಮತ್ತು ಅಪ್ರಯೋಜಕ (non-beneficial) ಎಂದು ವಿಭಾಗಿಸಿ ಹೇಳುತ್ತಿದ್ದ ಸಮಯದಲ್ಲಿ ನಾರಾಯಣ ರೆಡ್ಡಿಯವರು, ‘ಕೂಡದು, ಯಾವುದನ್ನೂ ಅಪ್ರಯೋಜಕ ಎಂದು ಕರೆಯಲಾಗದು’ ಎಂದು ತಿಳಿಸಿಕೊಟ್ಟರು. ಸೂಕ್ಷ್ಮಜೀವಿಗಳನ್ನು ವಾಯುಜೀವಕ (aerobic) ಅವಾಯುಜೀವಕ (anerobic) ಎಂದು ವಿಂಗಡಿಸಿದ ಅವರು, ಅವುಗಳು ಹೇಗೆ ಪರಸ್ಪರ ಸಹಬಾಳ್ವೆ ಮಾಡುತ್ತವೆ ಎಂಬುದನ್ನು ವಿವರಿಸಿದರು. ಸಹಬಾಳ್ವೆ-ಸಹಕಾರ- ಸಹಯೋಜನೆಯೇ ಸೂಕ್ಷ್ಮ ಜೀವಿಗಳ ಮಂತ್ರ ಎಂದು ತಿಳಿಸಿ ಹೇಳಿದರು. ‘ಸೂಕ್ಷ್ಮಜೀವಿಗಳಿಗೆ ಅನುಕೂಲಕರವಾದ ವಾತಾವರಣ ಕಲ್ಪಿಸಿ ಅವು ವೃದ್ಧಿಸುವಂತೆ ಮಾಡುವುದಷ್ಟೇ ನಮ್ಮ ಕೆಲಸ. ನೀವು ಮಣ್ಣಿಗೆ ಏನೇ ಗೊಬ್ಬರ ಹಾಕಿದರೂ ಅಲ್ಲಿರುವ ಸೂಕ್ಷ್ಮಜೀವಿಗಳಿಗೆ ಆಹಾರ ಕೊಡುತ್ತಿದ್ದೀರೇ ಹೊರತು ಮಣ್ಣಿಗಲ್ಲ. ತನ್ಮೂಲಕ ಹೂಮಸ್ ಅಭಿವೃದ್ಧಿಗೆ ಸಹಾಯ ಮಾಡುತ್ತೀರಿ’ ಎನ್ನುವುದು ನಾರಾಯಣ ರೆಡ್ಡಿಯವರ ವಿಚಾರವಾಗಿತ್ತು. ಇದನ್ನೇ ಹಿಂದೆ ನಾನು ಪ್ರೊ. ಶ್ರೀಪಾದ ಡಾಬೋಲ್ಕರ್ ಅವರಿಂದ ಕೇಳಿ ತಿಳಿದಿದ್ದ. ಮಣ್ಣಿನಲ್ಲಿ ಹೂಮಸ್ಸನ್ನು ಹೆಚ್ಚಿಸಲು ಸೂಕ್ಷ್ಮ ಜೀವಿಗಳಿಗೆ ಪುಷ್ಕಳವಾಗಿ ಆಹಾರ ಒದಗಿಸಬೇಕು ಎಂದು ಹೇಳುತ್ತಿದ್ದ ಅವರು, ಅದಕ್ಕಾಗಿ ಅನೇಕ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದರು. ನಾನು ಅವರ ವಿಧಾನಗಳನ್ನು ಅನುಸರಿಸುತ್ತಿದ್ದೆ. ನಾರಾಯಣ ರೆಡ್ಡಿಯವರಿಂದ ಡಾಬೋಲ್ಕರ್ ಅವರ ವಿಚಾರಗಳಿಗೆ ಹೆಚ್ಚಿನ ಬಲ ಸಿಕ್ಕಿತು.
ಇಎಂ ಅಥವಾ Effective Micro organisms, o ಬ್ಯಾಕ್ಟಿರಿಯಾಗಳ ಬಗ್ಗೆ ಸರಿಯಾದ ರೀತಿಯಲ್ಲಿ ತಿಳಿಸಿಕೊಟ್ಟವರೇ ನಾರಾಯಣ ರೆಡ್ಡಿ. ನಮಗೆ ಅದರ ಬಗ್ಗೆ ಗೊತ್ತಿರಲಿಲ್ಲ. ಆ ನಂತರ ಡಾ. ಚೆರಿಯನ್ ಅವರ ಸಹಾಯದಿಂದ ನಾವು ಅದರಲ್ಲಿ ಮುಂದುವರೆದ ಸಂಶೋಧನೆ ಮಾಡಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಿದೆವು.
ನಾರಾಯಣ ರೆಡ್ಡಿ ಅವರಿಂದ ನಾವು ರೋಗ-ಕೀಟ ನಿರ್ವಹಣೆಯ ಬಗ್ಗೆ ಹೆಚ್ಚಿನದನ್ನು ಕಲಿತೆವು, ಒಂದು ಕೀಟನಾಶಕ ತಯಾರಿಸಲು ಐದಾರು ಥರದ ಎಲೆಗಳನ್ನು ಬಳಸುವ ಮತ್ತು ವಿವಿಧ ಎಲೆಗಳ ಸಂಯೋಜನೆ(ಕಾಂಬಿನೇಷನ್)ಗಳನ್ನು ಮಾಡುವ ಉದ್ದೇಶ ಏನು ಎಂಬುದು ನಾರಾಯಣ ರೆಡ್ಡಿಯವರ ಜೊತೆ ಕೆಲಸ ಮಾಡಿದ ನಂತರವೇ ನಮಗೆ ಮನದಟ್ಟಾದದ್ದು. ಅದರ ಪರಿಕಲ್ಪನೆ ಅರ್ಥವಾದ ನಂತರ ವಿವಿಧ ಬೆಳೆಗಳಲ್ಲಿ, ವಿವಿಧ ಕೀಟರೋಗ ಸಮಸ್ಯೆಗಳಿಗೆ ಬೇರೆ ಬೇರೆ ಕಾಂಬಿನೇಶನ್ಗಳ ಮೇಲೆ ಪ್ರಯೋಗ ಮಾಡಲು ನಮಗೆ ಸಾಧ್ಯವಾಯಿತು. ಮುಂದೆ ನಾವು ಅದನ್ನು ಅಭಿವೃದ್ಧಿಪಡಿಸುತ್ತಾ ಬಂದೆವು.
ನಾರಾಯಣ ರೆಡ್ಡಿಯವರಿಗೆ ವಿಶಾಲವಾಗಿ ಯೋಚಿಸುವುದು ಸಾಧ್ಯವಾಗುತ್ತಿತ್ತು. ತಮ್ಮ ಸಿದ್ಧಾಂತಕ್ಕೆ, ನಂಬಿಕೆಗೆ ಧಕ್ಕೆಯಾಗುವಂತಿದ್ದರೂ, ಎಲ್ಲಾ ರೈತರಿಗೂ ಅನುಕೂಲವಾಗುವ ದಿಕ್ಕಿನಲ್ಲಿ ಅವರು ನಡೆಯುತ್ತಿದ್ದರೇ ಹೊರತು ಯಾವುದನ್ನೂ ಧಿಕ್ಕರಿಸುತ್ತಿರಲಿಲ್ಲ. ಉದಾ, ನಾರಾಯಣ ರೆಡ್ಡಿ ಮರಗಿಡಗಳಿಗೆ, ಮಿಶ್ರಬೆಳೆಗೆ ತುಂಬಾ ಆದ್ಯತೆ ಕೊಡುತ್ತಿದ್ದರು. ಅವರಿಗೆ ಏಕಬೆಳೆ ಪದ್ಧತಿ ಎಂದರೆ ಆಗುತ್ತಿರಲಿಲ್ಲ. ನಾವೆಲ್ಲ ವಾಣಿಜ್ಯ ಬೆಳೆಗಳನ್ನು ಏಕಬೆಳೆ ಮಾಡುತ್ತಿದ್ದ ರೈತರು. ಇಷ್ಟವಿದ್ದೋ, ಇಲ್ಲದೆಯೋ ಐವತ್ತು ವರ್ಷಗಳ ಹಸಿರು ಕ್ರಾಂತಿಗೆ ಒಗ್ಗಿಹೋಗಿದ್ದೆವು. ಈಗ ರಾಸಾಯನಿಕ ತ್ಯಜಿಸಿ ಈ ಎಲ್ಲಾ ಬೆಳೆಗಳನ್ನು ಸಾವಯವದಲ್ಲಿ ಬೆಳೆಯಲು ಸಾಧ್ಯವೇ ಎಂಬುದು ನಮ್ಮ ಕಾಳಜಿಯಾಗಿತ್ತು. ನಾರಾಯಣ ರೆಡ್ಡಿ ಇದನ್ನು ಅರ್ಥಮಾಡಿಕೊಂಡರು. ಅವರು ಏಕಬೆಳೆ ಪದ್ಧತಿಯ ಬಗ್ಗೆ ನಮ್ಮನ್ನು ತೆಗಳಲಿಲ್ಲ. ಅದರಲ್ಲೇ ರಾಸಾಯನಿಕ ತ್ಯಜಿಸಲು ನಮ್ಮನ್ನು ಉತ್ತೇಜಿಸಿದರು. ನಮ್ಮ ಮಣ್ಣಿನಲ್ಲಿ ಸಾವಯವ ಪದಾರ್ಥ ಹೆಚ್ಚು ಮಾಡುವುದು ಹೇಗೆ ಎನ್ನುವ ಕಡೆ ಅವರ ಆಲೋಚನೆ ಸಾಗಿತ್ತು. ಪ್ರತಿಯೊಂದು ಕೃಷಿ ಕ್ಷೇತ್ರವೂ ವಿಭಿನ್ನ ಎನ್ನುವುದನ್ನು ಅರಿತಿದ್ದ ಅವರು ಅಲ್ಲಿ ಸಾವಯವ ಕೃಷಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತಿದ್ದರು. ಸಾವಯವ ಕೃಷಿಯಲ್ಲಿ ಯಾವುದೇ ಉತ್ತಮ ವಿಧಾನವನ್ನು ಯಾರೇ ಅನುಸರಿಸುತ್ತಿರಲಿ ಅದನ್ನು ಉತ್ತೇಜಿಸುತ್ತಿದ್ದರು. ನಿಮಗೆ ಯಾವುದು ಹೊಂದಾಣಿಕೆಯಾಗುತ್ತದೋ ಅದನ್ನೇ ಮಾಡಿ ಎನ್ನುತ್ತಿದ್ದರೇ ಹೊರತು ತನ್ನದೇ ಸರಿ ಎನ್ನುವುದು ಅವರಲ್ಲಿ ಇರಲಿಲ್ಲ. ಸಾವಯವ ರಂಗದ ಯಾರ ಜೊತೆಗೂ ಭಿನ್ನಾಬಿಪ್ರಾಯ ಹೊಂದಿರಲಿಲ್ಲ. ತಮ್ಮ ಅಭಿಪ್ರಾಯವನ್ನು ಮಾತ್ರ ವ್ಯಕ್ತಪಡಿಸುತ್ತಿದ್ದರೇ ಹೊರತು, ಬೇರೆಯವರ ವಿಚಾರವನ್ನು ಟೀಕಿಸುತ್ತಿರಲಿಲ್ಲ. ಪರಿಸರ ಸ್ನೇಹಿ ಕೃಷಿಯನ್ನು ಒಬ್ಬೊಬ್ಬರು ಒಂದೊಂದು ಹೆಸರಲ್ಲಿ ಹೇಳುತ್ತಿರಬಹುದು- ಸಾವಯವ ಕೃಷಿ, ನ್ಯಾಚಿಕೋ ಫಾರ್ಮಿಂಗ್, ಡೂ ನಥಿಂಗ್, ಶೂನ್ಯ ಬಂಡವಾಳ, ಜೀವಚೈತನ್ಯ… ಇತ್ಯಾದಿ, ಇತ್ಯಾದಿ. ಆದರೆ, ಅವರೆಲ್ಲ ನಮ್ಮವರೇ.
ಪಂಚಭೂತಗಳ ನಡುವೆ ಭಿನ್ನಾಬಿಪ್ರಾಯವೇ? ಇದು ನಾರಾಯಣ ರೆಡ್ಡಿಯವರ ವೈಖರಿ, ಪರಸ್ಪರ ವಿಶ್ವಾಸ, ತಿಳುವಳಿಕೆ ದೈವೀಕವಾದದ್ದು; ಭಿನ್ನಾಭಿಪ್ರಾಯ ದುರದೃಷ್ಟಕರ.
ಪರಂಪರಾಗತ ಕೃಷಿಯ ಮೇಲೆಯೇ ಸಾವಯವ ಕೃಷಿಯನ್ನು ಕಟ್ಟಿದವರು ನಾರಾಯಣ ರೆಡ್ಡಿ, ಜೊತೆಗೆ ಅವರು ತುಂಬಾ ಪುಸ್ತಕಗಳನ್ನು ಓದುತ್ತಿದ್ದರು. ಎಲ್ಲವನ್ನೂ ಮನನ ಮಾಡಿಕೊಂಡು, ಪ್ರಯೋಗ ಮಾಡಿ ಕಲಿಯುತ್ತಿದ್ದರು. ಪರಂಪರಾಗತ ಜ್ಞಾನದ ವಿಚಾರದಲ್ಲಿ ಅವರು ಎಂದೂ ರಾಜಿಯಾಗಲಿಲ್ಲ. ತಾವು ಹೊಸದಾಗಿ ಕಲಿತದ್ದನ್ನು ಪರಂಪರಾಗತ ಜ್ಞಾನದ ಒರೆಗಲ್ಲಿಗೆ ಹಚ್ಚಿ ನೋಡಿ ಒಪ್ಪಿಕೊಳ್ಳುತ್ತಿದ್ದರು. ಎರಡನ್ನೂ ಹದವಾಗಿ ಬೆಸೆದರು.
ರಾಸಾಯನಿಕ ಕೃಷಿಯ ಈ ರುದ್ರತಾಂಡವದ ನಡುವೆಯೇ ನಾರಾಯಣ ರೆಡ್ಡಿ ಸಾವಯವ/ಸಹಜ ಕೃಷಿ ವಿಶ್ವವಿದ್ಯಾಲಯದ ಕನಸು ಕಂಡಿದ್ದರು. ಪ್ರತಿಯೊಬ್ಬ ರೈತನ ಕೃಷಿ ಕ್ಷೇತ್ರವೂ ಒಂದು ತರಬೇತಿ ಕೇಂದ್ರವಾಗಬೇಕು ಎಂದು ಹಂಬಲಿಸಿದ್ದರು. ಅದನ್ನು ತಮ್ಮ ದೊಡ್ಡಬಳ್ಳಾಪುರದ ಜಮೀನಿನಲ್ಲಿ ಸಾಕಾರಗೊಳಿಸಿದ್ದರು ಕೂಡ. ಅವರು ವಿಜ್ಞಾನಿಗಳನ್ನು, ಅಧಿಕಾರಿಗಳನ್ನು ತೀಕ್ಷವಾಗಿ ಟೀಕಿಸುತ್ತಿದ್ದರು. ರಾಸಾಯನಿಕ ಕೃಷಿಯಿಂದಾದ ಎಲ್ಲಾ ಅನಾಹುತಗಳಿಗೆ ಅವರೇ ಕಾರಣ ಎನ್ನುವ ಸಿಟ್ಟಿತ್ತು ಅವರಿಗೆ. ಆದರೆ ಅವರೊಳಗಡೆಯೂ ಪ್ರವೇಶ ಮಾಡಿ ಸಾವಯವ ಕೃಷಿಯನ್ನು ಪಸರಿಸುವ ಪ್ರಯತ್ನ ಅವರು ಮಾಡಲಿಲ್ಲ. ಈ ಅವಕಾಶವನ್ನು ನಾರಾಯಣ ರೆಡ್ಡಿ ಕಳೆದುಕೊಂಡರು ಎಂದೇ ನನಗನ್ನಿಸುತ್ತದೆ.
ಒಟ್ಟಿನಲ್ಲಿ, ನಮಗೆ ನಾಣ್ಯದ ಒಂದು ಮುಖವಷ್ಟೇ ಗೊತ್ತಿತ್ತು. ನಾರಾಯಣ ರೆಡ್ಡಿಯವರು ಇನ್ನೊಂದು ಮುಖವನ್ನು ತೋರಿಸಿದರು. ಅವರ ಸಂಪರ್ಕಕ್ಕೆ ಬಾರದೇ ಇದ್ದಿದ್ದರೆ ನಾನು ಒಬ್ಬ ಸರ್ವೆಸಾಮಾನ್ಯ ರೈತನಾಗಿರುತ್ತಿದ್ದೆ. ಇವತ್ತಿನ ಸುಂದರ್ರಾಮನ್ ಆಗಿರುತ್ತಿರಲಿಲ್ಲ. ಅವರು ದಿಕ್ಕು ತೋರಿಸಿದರು, ನಾವು ಸಾಗುತ್ತಾ ಮುಂದೆ ಹೋದೆವು. ತಮ್ಮಿಂದ ಕಲಿತವರು ತಮಗಿಂತ ಮುಂದೆ ಹೋದರೆ ಅವರು ತುಂಬಾ ಸಂತೋಷ ಪಡುತ್ತಿದ್ದರು. ನನ್ನ ಗುರು ಎಂದು ನಾನು ಘೋಷಿಸಿಕೊಂಡಿರುವ ನಾರಾಯಣ ರೆಡ್ಡಿಯರು ಅನೇಕ ಸಲ, ‘ಸುಂದರ್ರಾಮನ್ ನನ್ನ ಗುರು’ ಎನ್ನುತ್ತಿದ್ದರು. ತನಗಿಂತ ಮುಂದೆ ಹೋಗಿ ಒಂದೇ ಒಂದು ಉತ್ತಮ ಪ್ರಯೋಗ ಮಾಡಿದವರನ್ನೂ ಗುರುವಿನಂತೆ ಕಾಣುತ್ತಿದ್ದ ಎತ್ತರದ ವ್ಯಕ್ತಿತ್ವ ಅವರದ್ದು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಸಾವಯವ ಕೃಷಿಗೆ ಬರಬಹುದು ಎಂದು ರೈತರನ್ನು ಉತ್ತೇಜಿಸುತ್ತಿದ್ದ ನಾರಾಯಣ ರೆಡ್ಡಿ, ತಮ್ಮ ಜೀವಿತದ ಕೊನೇವರೆಗೂ ಯಾರು, ಯಾವಾಗ, ಎಲ್ಲಿಗೆ ಕರೆದರೂ ಸಿಕ್ಕಿದ ವಾಹನ ಹತ್ತಿಕೊಂಡು ತಕ್ಷಣ ಹೋಗಿ ತನ್ನಿಂದಾದ ರೀತಿಯಲ್ಲಿ ಅವರಿಗೆ ಸಹಾಯ ಮಾಡಿ ಬರುತ್ತಿದ್ದರು.
ಎಸ್. ಆರ್. ಸುಂದರ್ರಾಮನ್ ಕೃಷಿಕರು, ಸತ್ಯಮಂಗಲ, ತಮಿಳುನಾಡು
ಸುಸ್ಥಿರ ಕೃಷಿ ಪಾಠಗಳು ಪುಸ್ತಕ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ