ಭಾರತ ಬಹು ಭಾಷೆಗಳ ದೇಶ. ಭಾಷೆಗಳ ಆಧಾರದ ಮೇಲೆ ರೂಪುಗೊಂಡಿರುವ ಸಂಯುಕ್ತ ರಾಜ್ಯಗಳ ಒಕ್ಕೂಟ. ಜಗತ್ತಿನಲ್ಲೇ ಅತಿ ದೊಡ್ಡ ಗಣತಂತ್ರ, ಎಂದರೆ ಪ್ರಜಾಪ್ರಭುತ್ವವಿರುವ ದೇಶ ನಮ್ಮದು. ಈ ಬೃಹತ್ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಗುಟ್ಟೇನು?  ಒಂದೇ ಮಾತಿನ ಉತ್ತರವೆಂದರೆ ಅದು ಬಹುತ್ವವನ್ನು ಗೌರವಿಸುವ ಮನೋಧರ್ಮ. ಈ ದೇಶದ ಸಂಸ್ಕೃತಿಯಲ್ಲಿ ಬಹುತ್ವವನ್ನು ಗೌರವದಿಂದ ಅಂಗೀಕರಿಸುವ ಒಂದು ಮನೋಧರ್ಮ ಸಾವಿರಾರು ವರ್ಷಗಳ ಕಾಲದಿಂದಲೂ ಬೆಳೆದು ಬಂದಿದೆ. ನಮಗೆ ಬಳುವಳಿಯಾಗಿ ಬಂದಿರುವ ಈ ಬಹುತ್ವವನ್ನು ಕೋಮುವಾದಿ ಶಕ್ತಿಗಳಿಂದ ರಕ್ಷಿಸುವುದು ಹೇಗೆ ಎಂಬುದೇ ಈಗ ನಮ್ಮೆದುರು ಇರುವ ಸವಾಲು. ಇತರರಿಗಿಂತ ನನ್ನ ಮತ-ಪಂಥಗಳೇ ಶ್ರೇಷ್ಠ, ಇತರರಿಗಿಂತ ನಾನು ಅನುಸರಿಸುವ ವಿಧಿವಿಧಾನಗಳೇ ಶ್ರೇಷ್ಠ, ಇತರರಿಗಿಂತ ನನ್ನ ಧರ್ಮಗ್ರಂಥವೇ ಪರಮಸತ್ಯ, ಹೀಗೆ ‘ತನಗೆ ಸೇರಿದ್ದೆಲ್ಲ ಶ್ರೇಷ್ಠ, ಇತರರಿಗೆ ಸೇರಿದ್ದೆಲ್ಲಾ ಕನಿಷ್ಠ’ ಎಂಬುದೇ ಕೋಮುವಾದಿ ಮನಸ್ಸು.

ಇದೇ ಮನಸ್ಸು ಜನಾಂಗೀಯತೆಯನ್ನೂ ಹುಟ್ಟುಹಾಕುತ್ತದೆ. ಜಗತ್ತಿನ ಎಲ್ಲಾ ಜನಾಂಗಗಳಲ್ಲೂ ಜನಾಂಗೀಯ ತಾರತಮ್ಯದ ಮನಸ್ಸಿನ ಕೆಲವರು ಇದ್ದೇ ಇರುತ್ತಾರೆ. ಇವರು ಈ ಮೌಢ್ಯವನ್ನು ತೊರೆದು ಮೇಲಕ್ಕೆ ವಿಕಾಸವಾಗುವುದೇ ಇಲ್ಲ. ಇದೇ ಸಂಕುಚಿತ ಮನಸ್ಸು ತನಗೆ ಅನುಕೂಲಕರವಾದ ಭಾಷೆಯನ್ನು ಜಗತ್ತೆಲ್ಲ ಕಲಿಯಲಿ ಎಂದು ಬಯಸುತ್ತದೆ. ಬ್ರಿಟಿಷರು ಅನುಸರಿಸಿದ ವಸಾಹತು ನೀತಿಯೂ ಇದೇ. ಭಾಷೆ ಕೇವಲ ಸಂವಹನದ ಉಪಕರಣವಲ್ಲ, ಅದು ಸಂಸ್ಕೃತಿಯ ವಾಹಕ, ಸಂಸ್ಕೃತಿಯ ಸೂಕ್ಷ್ಮತೆಗಳು ‘ಮಾತು’ ಮತ್ತು ‘ಧ್ವನಿ’ಯಲ್ಲಿ ಅಡಗಿರುತ್ತವೆ. ಸಾವಿರಾರು ವರ್ಷಗಳಿಂದ ಬೆಳೆದು ಬಂದ ಭಾಷೆಗಳನ್ನು ಕೇವಲ ರಾಜಕೀಯ ಅನುಕೂಲಕ್ಕಾಗಿ ನಿರ್ಲಕ್ಷ್ಯ ಮಾಡಬಾರದು ಎಂಬ ಸೂಕ್ಷ್ಮತೆ ಈ ಮನಸ್ಸುಗಳಿಗೆ ಬರುವುದೇ ಇಲ್ಲ.

ಬಹುಭಾಷೆಗಳ ಈ ದೇಶದಲ್ಲಿ ರಾಜಕೀಯ ಒತ್ತಾಸೆ ಇರುವ ಒಂದು ಭಾಷೆಗೆ ಮಾತ್ರ ಪ್ರಾಮುಖ್ಯ ದೊರೆಯುತ್ತಿರುವ ಕುರಿತು ಭಾಷಾಸಮರವೊಂದು ಆರಂಭವಾಗಿರುವಂತಿದೆ. ಹಿಂದಿಯನ್ನು ಉತ್ತರ ಭಾರತದ ಹೆಚ್ಚು ಜನ ಮಾತನಾಡುತ್ತಿದ್ದುದರಿಂದ ಇದನ್ನು ಭಾರತದ ಏಕಮಾತ್ರ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ಪ್ರಯತ್ನಗಳು ನಡೆದವು. ಪ್ರಬಲವಾದ ವಿರೋಧದಿಂದಾಗಿ ಈ ಪ್ರಯತ್ನವನ್ನು ಕೈಬಿಡಲಾಯಿತು ಮತ್ತು ಸಂವಿಧಾನ 343ನೇ ವಿಧಿಯ ಪ್ರಕಾರ ದೇವನಾಗರಿ ಲಿಪಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾರತದ ಅಧಿಕೃತ ಭಾಷೆಗಳಾದವು. ನಮ್ಮ ಸಂವಿಧಾನದ ಪ್ರಕಾರ ಭಾರತಕ್ಕೆ ಯಾವುದೇ ಒಂದು ರಾಷ್ಟ್ರೀಯ ಭಾಷೆ ಇಲ್ಲ. ಸಾಂವಿಧಾನಿಕವಾಗಿ 22 ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಗುರುತಿಸಲಾಗಿದ್ದರೂ 2001ನೇ ಜನಗಣತಿಯ ಪ್ರಕಾರ 122 ಪ್ರಮುಖ ಭಾಷೆಗಳು ಮತ್ತು 1599 ಇತರ ಭಾಷೆಗಳನ್ನು ನಮ್ಮ ಜನ ಮಾತನಾಡುತ್ತಾರೆ. ‘ಪ್ರಮುಖ’ ಮತ್ತು ‘ಇತರ’ ಎಂಬ ವಿಭಾಗೀಕರಣ ಕುರಿತು ಅನೇಕ ತಕರಾರುಗಳಿರುವುದನ್ನು ನಾವು ಸಹಜವಾಗಿ ಅರ್ಥ ಮಾಡಿಕೊಳ್ಳಬಹುದು.

ಸ್ವಾತಂತ್ರ್ಯಪೂರ್ವದಿಂದಲೂ ತಮಿಳುನಾಡು ಹಿಂದಿ ಹೇರಿಕೆಯ ಪ್ರಬಲ ವಿರೋಧಿ. 1937ರಲ್ಲಿ ರಾಜಗೋಪಾಲಾಚಾರಿಯವರು (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಮದರಾಸಿನ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ಶಾಲೆಗಳಲ್ಲಿ ಹಿಂದಿ ಬೋಧನೆಯನ್ನು ಕಡ್ಡಾಯ ಮಾಡಲಾಯಿತು. ಆದರೆ ಹಿಂದಿ ಹೇರಿಕೆಯ ವಿರುದ್ಧ ಉಗ್ರವಾದ ಪ್ರತಿಭಟನೆ ನಡೆದು ಸಾವುನೋವುಗಳು ಸಂಭವಿಸಿ ಕೊನೆಗೆ ಸರ್ಕಾರವೇ ಉರುಳಿಬಿತ್ತು. 1940 ರಲ್ಲಿ ಹಿಂದಿ ಕಡ್ಡಾಯದ ಆದೇಶವನ್ನು ಹಿಂಪಡೆಯಲಾಯಿತು. 1963ರಲ್ಲಿ ನಡೆದ ಹಿಂದಿ ವಿರೋಧಿ ಸಮ್ಮೇಳನದಲ್ಲಿ ಅಣ್ಣಾದುರೈ ಮತ್ತು 500 ಸಂಗಡಿಗರು ಸಂವಿಧಾನದ 17ನೇ ಭಾಗವನ್ನು ಸುಟ್ಟುಹಾಕಿ 6 ತಿಂಗಳು ಜೈಲುಶಿಕ್ಷೆಗೆ ಒಳಗಾಗಬೇಕಾಯಿತು. ಒಬ್ಬ ಡಿಎಮ್‌ಕೆ ಸದಸ್ಯ ಆತ್ಮಾಹುತಿಯನ್ನೂ ಮಾಡಿಕೊಂಡ. 1968ರಲ್ಲಿ ನಡೆದ ಸಂಸತ್ ಸಭೆಯಲ್ಲಿ ಅಧಿಕೃತ ಭಾಷಾನಿರ್ಣಯವನ್ನು ಕೈಗೊಂಡು ತ್ರಿಭಾಷಾ ಸೂತ್ರವನ್ನು ದೇಶದಾದ್ಯಂತ ಜಾರಿಗೆ ತರಲಾಯಿತು. ಇದರ ವಿರುದ್ಧವೂ ತಮಿಳುನಾಡಿನ ವಿದ್ಯಾರ್ಥಿ ಸಮುದಾಯ ದೊಡ್ಡ ಪ್ರತಿಭಟನೆ ನಡೆಸಿತು. ಅಣ್ಣಾದುರೈ ನೇತೃತ್ವದ ಡಿಎಮ್‌ಕೆ ಸರ್ಕಾರವೂ ಇದನ್ನು ಪ್ರತಿಭಟಿಸಿ 26 ಜನವರಿ 1968ರ ಶಾಸಕಾಂಗ ಸಭೆಯಲ್ಲಿ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸುವ ನಿರ್ಣಯವನ್ನು ಅಂಗೀಕರಿಸಿತು ಮತ್ತು ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತು. ಇಡೀ ದೇಶದಲ್ಲಿ ಇಂದಿಗೂ ತಮಿಳುನಾಡು ಮಾತ್ರ ತ್ರಿಭಾಷಾ ಸೂತ್ರದಿಂದ ಹೊರಗುಳಿದಿದೆ. ಉಳಿದೆಲ್ಲ ರಾಜ್ಯಗಳು ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿವೆ. ತಮಿಳುನಾಡಿನ ಶಾಲೆಗಳಲ್ಲಿ ತಮಿಳು ಮತ್ತು ಇಂಗ್ಲಿಷ್ ಎರಡು ಭಾಷೆಗಳನ್ನು ಮಾತ್ರ ಬೋಧಿಸಲಾಗುತ್ತದೆ. ಆದರೆ ಶಾಲೆಗಳಲ್ಲಿ ಮಾಧ್ಯಮದ ವಿಷಯ ಬಂದಾಗ ತಮಿಳರ ಭಾಷಾಭಿಮಾನ ಹಿಂದೆ ಸರಿದಿದ್ದು ಒಂದು ಚೋದ್ಯವೇ ಸರಿ. ತಮಿಳು ಮಾಧ್ಯಮದ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸುವಾಗ ತಮಿಳರು ತೀರ ಸಡಿಲವಾಗಿಬಿಟ್ಟರು.

ತ್ರಿಭಾಷಾ ಸೂತ್ರದ ಕುರಿತಾಗಿ ಕರ್ನಾಟಕದಲ್ಲೂ ಅಸಮಾಧಾನದ ಹೊಗೆ ಇದ್ದೇ ಇದೆ. ಬಹಳ ಹಿಂದೆಯೇ ಕುವೆಂಪು ಅವರು “ತ್ರಿಭಾಷಾ ಸೂತ್ರವೋ ತ್ರಿಶೂಲವೋ” ಎಂದು ಹೇಳಿದ್ದುಂಟು. ಕುವೆಂಪು ಅವರ ಈ ಕೆಲವೊಂದು ಮಾತುಗಳನ್ನು ಗಮನಿಸಿ:

  • ಭಾರತದಲ್ಲಿ ಭಾಷಾಭಿಮಾನದ ಅತಿರೇಕದಿಂದ ಉಂಟಾಗಬಹುದಾದ ಗೊಂದಲವನ್ನು ಪರಿಹರಿಸಲು ಜನರು ಮೂರು ಭಾಷೆಗಳನ್ನು ಕಲಿಯಬೇಕು ಎಂದು ‘ತ್ರಿಭಾಷಾ ಸೂತ್ರ’ವನ್ನು ಘೋಷಿಸಲಾಗಿದೆ. ಇಂಗ್ಲಿಷ್‌ಅನ್ನು ಅಂತಾರಾಷ್ಟ್ರೀಯ ಮಾಧ್ಯಮಕ್ಕಾಗಿಯೂ, ಹಿಂದಿಯನ್ನು ಭಾರತ ರಾಷ್ಟ್ರೀಯ ಮಾಧ್ಯಮಕ್ಕಾಗಿಯೂ, ಕನ್ನಡವನ್ನು (ಇತರ ದೇಶಭಾಷೆಗಳಲ್ಲಿ ಒಂದನ್ನು) ಕರ್ನಾಟಕ ರಾಜ್ಯದ ಮಾಧ್ಯಮಕ್ಕಾಗಿಯೂ ಎಂಬರ್ಥದಲ್ಲಿ. ಮೇಲುನೋಟಕ್ಕೆ ಇದು ಸಾಧುವಾಗಿ ತೋರುತ್ತಿದೆಯಾದರೂ ಸ್ವಲ್ಪ ವಿಚಾರಿಸಿದರೆ ಗೊತ್ತಾಗುತ್ತದೆ ಇದು ಮಹಾ ಅಪಾಯಕಾರಿ ಎಂದು.
  • ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲಿಷುಗಳು ಬಲಾತ್ಕಾರ ಭಾಷೆಗಳಾಗಿವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ.
  • ಆದ್ದರಿಂದ ನನ್ನ ವಾದ ಇಷ್ಟು: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ: ಅಂದರೆ “ಬಹುಭಾಷೆಗಳಲ್ಲಿ ದ್ವಿಭಾಷೆ” ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ”.
  • ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ ‘ಬಹುಭಾಷೆಗಳಲ್ಲಿ ದ್ವಿಭಾಷಾ’ ಸೂತ್ರ ತ್ರಿಭಾಷಾಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.
  • ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟೀಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ?

ಕುವೆಂಪು ಅವರು ಬಹುಭಾಷೆಗಳಲ್ಲಿ ತ್ರಿಭಾಷೆ ಇರಬೇಕೇ ಹೊರತು ಬರೀ ತ್ರಿಭಾಷೆಯಲ್ಲ ಎಂದು ಹೇಳುತ್ತಾರೆ. ಎಂದರೆ ಹಿಂದಿಯನ್ನೇ ಕಡ್ಡಾಯವಾಗಿ ಕಲಿಯಬೇಕು ಎಂಬುದು ಪ್ರಜಾಸತ್ತಾತ್ಮಕವಲ್ಲ ಆದ್ದರಿಂದ ಬೇಡ ಎನ್ನುತ್ತಾರೆ. ಈ ವಿಷಯದ ಬಗ್ಗೆ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸುಕಾಂತ್ ಮಜುಂದಾರ್ ಅವರು ಉದಾರವಾಗಿ ವ್ಯಾಖ್ಯಾನಿಸಿರುವುದು ಸಂತೋಷದ ವಿಷಯ. ಇವರು ಸಂಸತ್ತಿಗೆ ಲಿಖಿತ ಉತ್ತರ ನೀಡಿ ತ್ರಿಭಾಷಾ ಸೂತ್ರದಡಿ ಇಂಥದ್ದೇ ಭಾಷೆ ಕಲಿಯಬೇಕು ಎಂದು ರಾಜ್ಯಗಳ ಮೇಲೆ ಒತ್ತಾಯ ಹೇರುವುದಿಲ್ಲ, ಯಾವ ಭಾಷೆ ಕಲಿಯಬೇಕು ಎಂಬುದನ್ನು ಆಯಾ ರಾಜ್ಯಗಳು ಮತ್ತು ವಿದ್ಯಾರ್ಥಿಗಳು ನಿರ್ಧರಿಸುತ್ತಾರೆ ಎಂದಿದ್ದಾರೆ.

ತ್ರಿಭಾಷಾ ಸೂತ್ರವನ್ನೇ ನೆಪವಾಗಿಟ್ಟುಕೊಂಡು ಹಿಂದಿಯ ದಟ್ಟ ಪ್ರಭಾವದಿಂದಾಗಿರುವ ದುಷ್ಪರಿಣಾಮಗಳಿಗೆ ಉತ್ತರ ಭಾರತದ ಹಿಂದಿಯೇತರ ಪ್ರದೇಶಗಳೇ ಕನ್ನಡಿಯಾಗಿವೆ. ಉದಾಹರಣೆಗೆ ‘ಮೈಥಿಲಿ’ ಎಂಬ ಸಂವಿಧಾನ ಅಂಗೀಕೃತ ಸ್ವತಂತ್ರ ಭಾಷೆಯನ್ನು ಬಿಹಾರ, ಜಾರ್ಖಾಂಡ್, ದರ್ಭಾಂಗ್ ಅಷ್ಟೇ ಅಲ್ಲದೆ ಕೆಲವು ನೇಪಾಳಿಯರೂ ಮಾತನಾಡುತ್ತಾರೆ. ಸುಮಾರು 21 ಮಿಲಿಯ ಜನ ಮಾತನಾಡುವ ಈ ಭಾಷೆ ಸ್ವತಂತ್ರವಾಗಿ ವಿಕಾಸವಾದ, ಹಿಂದಿ ಭಾಷೆಗೆ ಸಂಬಂಧವಿಲ್ಲದ ದೇವನಾಗರಿ ಲಿಪಿ ಅಳವಡಿಸಿಕೊಂಡಿರುವ ಒಂದು ಭಾಷೆ. ಭಾರತದ ಯಾವ ಭಾಗದಲ್ಲೂ ಇದು ಶಾಲಾ ಮಾಧ್ಯಮದ ಭಾಷೆಯಾಗಿಲ್ಲ. ಹೀಗೇಕೆ ಎಂಬ ಪ್ರಶ್ನೆಗೆ ಸಿಗುವ ಸಚಿವಮಹೋದಯರ ಸರ್ಕಾರಿ ಉತ್ತರವೆಂದರೆ ಮೈಥಿಲಿ ಹಿಂದಿಯ ಉಪಭಾಷೆ, ಹಾಗಾಗಿ ಪ್ರಾಥಮಿಕ ಶಾಲೆಗಳಲ್ಲಿ ಪ್ರತ್ಯೇಕ ಮೈಥಿಲಿ ಮಾಧ್ಯಮವಿಲ್ಲ! ಮೈಥಿಲಿಯನ್ನು ಅಭಿಜಾತ ಭಾಷೆಯಾಗಿ ಪರಿಗಣಿಸಬೇಕೆಂಬ ಬೇಡಿಕೆ ಇದೆ.

ಭಾಷೆಗಳು ಸಹಜವಾಗಿ ರೂಪಾಂತರಗೊಳ್ಳುವ, ವಿಕಾಸವಾಗುವ ಕ್ರಿಯೆಯನ್ನು ಒಪ್ಪಲೇ ಬೇಕು. ಆದರೆ ರಾಜಕೀಯ ಕಾರಣಗಳಿಗೆ, ಯಜಮಾನಿಕೆಯ ದಬ್ಬಾಳಿಕೆಯಿಂದಾಗಿ ಒಂದು ಭಾಷೆ ಅಂಚಿಗೆ ಸರಿದು ಕಾಣದಂತಾಗುವ ಪರಿಸ್ಥಿತಿಗೆ ಎಡೆಮಾಡಿಕೊಡುವುದು ನಾಗರಿಕ ಸರ್ಕಾರದ ಲಕ್ಷಣವಲ್ಲ. ಭಾಷಾ ಸೂಕ್ಷ್ಮತೆಯನ್ನು ಯಾವುದೇ ಪಕ್ಷದ ಸರ್ಕಾರವಾದರೂ ಬೆಳೆಸಿಕೊಳ್ಳಬೇಕು. ಮೂರನೇ ಭಾಷೆಯನ್ನು ಕಡ್ಡಾಯ ಮಾಡುತ್ತಿರುವ ಈ ಸಂದರ್ಭದಲ್ಲಿ ಗಾಯಕ ಟಿ.ಎನ್. ಕೃಷ್ಣ ಅವರು ಕೇಳುವ ಪ್ರಶ್ನೆ ಹೀಗಿದೆ: ಚರಿತ್ರೆಯ ಪಠ್ಯಪುಸ್ತಕಗಳಿಂದ ಆಯ್ದ ಅಧ್ಯಾಯಗಳನ್ನು ಕತ್ತರಿಸಿ ತೆಗೆದು ವಿದ್ಯಾರ್ಥಿಗಳಿಗೆ ಈ ಹೆಚ್ಚಿನ ಓದು ತ್ರಾಸದಾಯಕವಾಗುತ್ತದೆ ಎನ್ನುವ ಸರ್ಕಾರ ಮೂರನೇ ಭಾಷೆಯ ಹೊರೆಯನ್ನು ಏಕೆ ಹೇರುತ್ತಿದೆ? ವಿದ್ಯಾರ್ಥಿಗಳು ತಮಗೆ ಅಗತ್ಯವೆನಿಸಿದರೆ ತಾವೇ ತಮಗೆ ಬೇಕಾದ ಮೂರನೇ ಭಾಷೆಯನ್ನು ಕಲಿಯಬಹುದಲ್ಲವೆ?

ಒತ್ತಡಕ್ಕೆ ಮಣಿದಾದರೂ ಅಮಿತ್‌ಶಾ ಅವರು ಕರ್ನಾಟಕ ಸರ್ಕಾರದೊಡನೆ ಪತ್ರವ್ಯವಹಾರವನ್ನು ಕನ್ನಡದಲ್ಲಿ ಮಾಡುವುದಾಗಿಯೂ ಮತ್ತು ಕನ್ನಡಿಗರ ಮೇಲೆ ಹಿಂದಿ ಭಾಷೆಯನ್ನು ಹೇರುವುದಿಲ್ಲವೆಂದೂ ಸ್ಪಷ್ಟಪಡಿಸಿರುವುದು ಸ್ವಾಗತಾರ್ಹ. ಅಭಿವೃದ್ಧಿಗೂ ಭಾಷಾಭಿಮಾನಕ್ಕೂ ಸಂಬಂಧವಿದೆಯೆ? ಹೌದು ಎನ್ನುತ್ತಾರೆ ಪ್ರೇರಣಾಸಿಂಗ್ ಅವರು. ಅವರ ಪ್ರಕಾರ ದಕ್ಷಿಣ ಭಾರತೀಯರಲ್ಲಿ ಭಾಷಾಭಿಮಾನ, ಸಂಸೃತಿಯ ಅಭಿಮಾನ ಉತ್ತರ ಭಾರತೀಯರಿಗಿಂತ ಹೆಚ್ಚಾಗಿದ್ದು ರಾಜ್ಯದ ಜನರನ್ನು ಒಗ್ಗೂಡಿಸಿದೆ. ಹಾಗಾಗಿ ಸಮರ್ಪಣೆಯ ಭಾವದಿಂದ ಕೆಲಸಮಾಡಿ ದಕ್ಷಿಣ ರಾಜ್ಯಗಳು ಪ್ರಗತಿ ಸಾಧಿಸಿವೆ ಎನ್ನುತ್ತಾರೆ. ನಲವತ್ತೇಳರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಉತ್ತರದ ಮತ್ತು ದಕ್ಷಿಣದ ರಾಜ್ಯಗಳ ನಡುವೆ ಪ್ರಗತಿಯ ವಿಷಯದಲ್ಲಿ ವ್ಯತ್ಯಾಸಗಳಿರಲಿಲ್ಲ. ಕ್ರಮೇಣ ದಕ್ಷಿಣ ರಾಜ್ಯಗಳು ಉತ್ತರಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿದುವು. ಈಗ ದಕ್ಷಿಣ ಭಾರತೀಯರ ತೆರಿಗೆ ಹಣ ಕುಂಟುತ್ತಿರುವ ಉತ್ತರಭಾರತಕ್ಕೆ ಹೆಚ್ಚು ಲಭ್ಯವಾವಾಗುತ್ತಿದೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ಇಂತಹ ಆರ್ಥಿಕ ಹಂಚಿಕೆ ಅಗತ್ಯವೆನಿಸಿದರೂ ಅದು ನ್ಯಾಯೋಚಿತವಾಗಿರಲಿ ಎಂಬುದು ದಕ್ಷಿಣ ಭಾರತೀಯರ ಆಗ್ರಹ.

ಇದೇನೇ ಇರಲಿ, ಸಂಸ್ಕೃತಿ, ಆರ್ಥಿಕ ಪ್ರಗತಿ, ಸಮುದಾಯದ ಆರೋಗ್ಯ, ಅರಿವು, ಶಿಕ್ಷಣ ಇತ್ಯಾದಿ ಬದುಕಿನ ಪ್ರಮುಖ ಶಾಖೆಗಳ ಮೇಲೆ ಗಾಢವಾದ ಪ್ರಭಾವ ಬೀರುವ ಭಾಷೆಯ ವಿಷಯವನ್ನು ಯಾವುದೇ ಸರ್ಕಾರವೂ ಹಗುರವಾಗಿ ಪರಿಗಣಿಸುವಂತಿಲ್ಲ. ದಿನಕಳೆದಂತೆ ಮುಚ್ಚುತ್ತಿರುವ ಕನ್ನಡ ಶಾಲೆಗಳು ನಮ್ಮ ಅವನತಿಯನ್ನಲ್ಲದೆ ಬೇರೇನನ್ನೂ ಸೂಚಿಸುವುದಿಲ್ಲ. ಈ ಯಾವುದರ ಅರಿವೂ ಇಲ್ಲದೆ, ಮುಂದಿನ ಯಾವ ಕಾಣ್ಕೆಯನ್ನೂ ಕಾಣಲಾರದ ನಮ್ಮ ಸರ್ಕಾರ, ಅಧಿಕಾರಿ ವರ್ಗ “ಮಕ್ಕಳು ಬರದಿದ್ದರೆ ನಾವೇನು ಮಾಡೋಣ?” ಎಂದು ಕೈಚೆಲ್ಲಿ ಕುಳಿತಿದೆ. ಮಕ್ಕಳು ಕನ್ನಡ ಶಾಲೆಗೆ ಬರುವಂತೆ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಕೆಲಸ. ಕನ್ನಡ ಶಾಲೆಗಳಿಗಾಗಿ ಏನನ್ನೂ ಮಾಡದೆ ಕನ್ನಡ ಶಾಲೆಗಳನ್ನೆಲ್ಲ ಇಂಗ್ಲಿಷ್ ಶಾಲೆಗಳನ್ನಾಗಿ ಮಾಡುತ್ತ ಯಾವ ಪುರುಷಾರ್ಥವನ್ನು ಸಾಧಿಸುತ್ತಿದ್ದೇವೆ?

  • ಪ್ರೊ. ಜಿ. ಎಸ್. ಜಯದೇವ, ದೀನಬಂಧು ಬಳಗ

ಈ ಲೇಖನವು ದೀನಬಂಧು ಸಂಸ್ಥೆಯ ಅನುಭವ : ಗಣಿತ-ವಿಜ್ಞಾನಗಳ ಒಳನೋಟ ಸಂಪುಟ ೧೧; ಸಂಚಿಕೆ ೦೩ ರಲ್ಲಿ ಪ್ರಕಟವಾಗಿದೆ. ಪೂರ್ಣ ಪತ್ರಿಕೆಯನ್ನು ಓದಲು/ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Close
Sign in
Close
Cart (0)

No products in the cart. No products in the cart.